




ವಿಟ್ಲ: ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮಂಡ್ಯೂರು ಎಂಬಲ್ಲಿ ಜನರಿಗೆ ಒಂದು ಕ್ಷಣ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಂಪನದ ಅನುಭವ ಕೇವಲ ಒಂದೆರಡು ಸೆಕೆಂಡುಗಳು ಮಾತ್ರ ಉಂಟಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಸಾಕ್ಷಿಗಳು ಕಂಡು ಬಂದಿಲ್ಲ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಸ್ಪೋಟಕ ತಜ್ಞರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.ಪ್ರಕೃತಿಗೆ ವಿರುದ್ಧವಾಗಿ ಭೂಮಿಯನ್ನು ಬಗೆದು ಸಾಗಿಸುತ್ತಿರುವ ಬಾಕ್ಸೈಟ್ ಮಾಫಿಯಾವೇ ಈ ಕಂಪನಕ್ಕೆ ಕಾರಣವೆಂದು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷಗಳ ಹಿಂದೆ ನಡೆದಿದ್ದ ಭಾಗಮಂಡಲ ದುರಂತ ಹಾಗೂ ಕಳೆದ ವರ್ಷ ನಡೆದಿದ್ದ ಅಂಕೋಲಾ-ಶಿರೂರು ದುರಂತದಂತೆ ಕನ್ಯಾನದಲ್ಲಿ ಮರುಕಳಿಸುವ ಭೀತಿಯಿದೆ ಎಂದು ತಿಳಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ವಿಟ್ಲದಲ್ಲಿ ನಡೆದ ಇದೇ ರೀತಿಯ ಘಟನೆಯ ಹಿಂದಿನ ಕಾರಣ ಸ್ಥಳೀಯ ಕಲ್ಲಿನ ಕೋರೆಯ ಸ್ಫೋಟವಾಗಿತ್ತು ಎಂಬುದು ಸಾಬೀತು ಆಗಿತ್ತು ಆದರೂ ಈಗ ಅದೇ ಕಾರಣವಾಗಿರಬಹುದೆಂಬ ಶಂಕೆ ಮೂಡುತ್ತಿದೆ.
ಯಾವುದೇ ಕ್ಷಣ ಮತ್ತೆ ಕಂಪನದ ಶಬ್ದ ಕೇಳಿಸಿದಲ್ಲಿ ಅಥವಾ ಕಂಪನ ಸಂಭವಿಸಿದರೆ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಅಧಿಕಾರಿಗಳು ತಿಳಿಸಿದ್ದಾರೆ.