ವಿವಿಧ ಧಾರ್ಮಿಕ ಸಾಂಸ್ಕೃತಿಕ ವೈದಿಕ ಕಾರ್ಯಕ್ರಮಮಗಳೊಂದಿಗೆ ವಿಟ್ಲ ಶಾರದೋತ್ಸವ ಕಾರ್ಯಕ್ರಮ ಸಂಪನ್ನ
ಆಕರ್ಷಣೀಯ ಟ್ಯಾಬ್ಲೋ, ಕುಣಿತ ಭಜನೆ, ಚೆಂಡೆ ವಾದನದೊಂದಿಗೆ ವಿಟ್ಲದ ಪ್ರಮುಖ ರಸ್ತೆಯಲ್ಲಿ ಸಾಗಿ ಬಂದ ಶ್ರೀ ದೇವಿಯ ವೈಭವದ ಶೋಭಯಾತ್ರೆ




ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ದ.ಕ. ಆಶ್ರಯದಲ್ಲಿ 53ನೇ ವರ್ಷದ ವಿಟ್ಲ ಶಾರದೋತ್ಸವ ಕಾರ್ಯಕ್ರಮವು ಅ.09ನೇ ಬುಧವಾರದಿಂದ 13ನೇ ಆದಿತ್ಯವಾರದವರೆಗೆ ವಿಟ್ಲದ ಶ್ರೀ ಅನಂತೇಶ್ವರ ದೇವಸ್ಥಾನದ “ಶ್ರೀ ಅನಂತ ಸದನ”ದಲ್ಲಿ ವಿಜೃಂಭಣೆಯಿಂದ ನಡೆಯಿತು.


ದಿನಾಂಕ 09-10-2024ನೇ ಬುಧವಾರದಂದು ಬೆಳಗ್ಗೆ ಗಣಪತಿ ಹವನ ನಡೆದು ಬಳಿಕ ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ, ಬಳಿಕ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಲಾಯಿತು. ನಂತರ ಶ್ರೀ ಮಾತೆಯ ವಿಗ್ರಹವನ್ನು ಶ್ರೀ ಚಂದ್ರನಾಥ ಸ್ವಾಮಿ ಜೈನ ಬಸದಿಯಿಂದ ಉತ್ಸವದ ಸ್ಥಳಕ್ಕೆ ಪ್ರತಿಷ್ಠಾ ವಿಧಿ ಕಾರ್ಯಕ್ರಮಕ್ಕೆ ಮೆರವಣಿಗೆಯಲ್ಲಿ ತಂದು, ಬಳಿಕ ವೇದಮೂರ್ತಿ ಶ್ರೀ ಎಂ. ವಿಕಾಸ್ ಭಟ್, ಪುರೋಹಿತರು, ಶ್ರೀರಾಮ ಮಂದಿರ ಹನುಮಗಿರಿ ವಿಟ್ಲ ಇವರಿಂದ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠೆ ನಡೆಯಿತು. ಶ್ರೀ ದೇವತಾ ಸಮಿತಿ, ವಿಟ್ಲ ಇದರ ಗೌರವಾಧ್ಯಕ್ಷ ಎಂ. ರಾಧಾಕೃಷ್ಣ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮವನ್ನು ಬಂಗಾರು ಅರಸರು, ವಿಟ್ಲ ಅರಮನೆ ಆನುವಂಶಿಕ ಮೊಕ್ತೇಸರರು, ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು ಶ್ರೀ ದೇವತಾ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಶಂಕರ ನಾರಾಯಣ ಭಟ್ ಕಲ್ಲಕಟ್ಟ, ಬಾಲಗೋಕುಲ ಕಾಸರಗೋಡು ಜಿಲ್ಲಾ ರಕ್ಷಾಧಿಕಾರಿ, ಜಿತೇಶ್, ಶ್ರೀ ಚಂದ್ರನಾಥ ಜೈನ ಬಸದಿ ವಿಟ್ಲ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹರೀಶ್ C.H. ಅಧ್ಯಕ್ಷರು ರೋಟರಿ ಕ್ಲಬ್ ವಿಟ್ಲ, ಸಂಗೀತ ಜಗದೀಶ್ ಪಾಣೆಮಜಲು, ಉಪಾಧ್ಯಕ್ಷರು, ವಿಟ್ಲ ಪಟ್ಟಣ ಪಂಚಾಯತ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ “ಸುಧಾತನಯ” ನಾಮಾಂಕಿತ ವೇದಮೂರ್ತಿ ಶ್ರೀ ವಿಜಯ್ ಕುಮಾರ್ ಭಟ್ ಮತ್ತು ಬಳಗ ಶ್ರೀ ಸಾರಸ್ವತ ಭಜನಾ ಮಂಡಳಿ ವಿಟ್ಲ ಇವರಿಂದ ’ಭಜನ್ ಸಂಧ್ಯಾ’ ಸಾಂಸ್ಕ್ರತಿಕ ಕಾರ್ಯಕ್ರಮ ನಡೆದ ನಂತರ, ರಾತ್ರಿ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು.

ದಿನಾಂಕ 10-10-2024ನೇ ಗುರುವಾರ ಪೂರ್ವಾಹ್ನ ಪ್ರಸನ್ನ ಪೂಜೆ, ಸಂಗೀತ ಸ್ಪರ್ಧೆ ಬಳಿಕ ವಂದೇ ಮಾತರಂ ಬಳಿಕ ದೇವರ ಚಿತ್ರ ರಚನೆ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ರಂಗವಲ್ಲಿ ಸ್ಪರ್ಧೆ ನಡೆಯಿತು. ಸಂಜೆ ಜಿ.ಎಸ್.ಬಿ. ಶ್ರೀರಾಮ ಭಜನಾ ಮಂಡಳಿ ಶ್ರೀ ರಾಮಮಂದಿರ ಹನುಮಗಿರಿ, ವಿಟ್ಲ ಇವರಿಂದ “ಹರಿನಾಮ ಸಂಕೀರ್ತನೆ” ನಡೆದು ಬಳಿಕ ಸಂತೋಷ್ ವಿಟ್ಲ ಇವರಿಂದ “ಕೊಳಲುವಾದನ” ನಡೆಯಿತು. ರಾತ್ರಿ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು.
ದಿನಾಂಕ 11-10-2024ನೇ ಶುಕ್ರವಾರದಂದು ಪೂರ್ವಾಹ್ನ ಪ್ರಸನ್ನ ಪೂಜೆ ನಡೆದು ಬಳಿಕ ಭಗವದ್ಗೀತಾ ಅಧ್ಯಾಯ 15ರ ಮೊದಲ 10 ಶ್ಲೋಕಗಳ ಗೀತಾ ಕಂಠಪಾಠ ಸ್ಪರ್ಧೆ ನಡೆಯಿತು. ನಂತರ ಹೂಹಾರ ಸ್ಪರ್ಧೆ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ರಾಮ ಜನ್ಮಭೂಮಿಯ ಪ್ರಾಣ ಪ್ರತಿಷ್ಠೆ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು. ಸಂಜೆ ವಿಶೇಷ ದೀಪಾಲಂಕಾರದೊಂದಿಗೆ “ರಂಗಪೂಜೆ” ನಡೆದ ನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರಾಜೇಶ್ ವಿಟ್ಲ ಸಾರಥ್ಯದ ಆರ್.ಕೆ. ಕುಣಿತ ಭಜನಾ ತಂಡ, ವಿಟ್ಲ ಇವರಿಂದ “ಕುಣಿತ ಭಜನೆ” ಕಾರ್ಯಕ್ರಮ ನಡೆಯಿತು. ರಾತ್ರಿ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು.

ದಿನಾಂಕ 12-10-2024ನೇ ಶನಿವಾರದಂದು ಬೆಳಿಗ್ಗೆ ಪ್ರಸನ್ನ ಪೂಜೆ ನಡೆದು ಬಳಿಕ ಛದ್ಮವೇಷ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಗಂಟೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ “ದಾಸವಾಣಿ” ಕಾರ್ಯಕ್ರಮ ನಡೆಯಿತು. ರಾತ್ರಿ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು.
ದಿನಾಂಕ 13-10-2024ನೇ ಆದಿತ್ಯವಾರ ವಿಜಯದಶಮಿಯಂದು ಬೆಳಿಗ್ಗೆ ಪ್ರಸನ್ನ ಪೂಜೆ ನಡೆದು ಬಳಿಕ ಅಕ್ಷರ ಅಭ್ಯಾಸ ನಡೆಯಿತು. ಬಳಿಕ ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು ಶ್ರೀ ದೇವತಾ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಅಶೋಕ್ ಶೆಟ್ಟಿ ಸರಪಾಡಿ, ಯಕ್ಷಗಾನ ಕಲಾವಿದರು ಮತ್ತು ಗೌರವಾಧ್ಯಕ್ಷರು ಸಂಸ್ಕಾರ ಭಾರತಿ ದ.ಕ. ಜಿಲ್ಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ರಜಿತ್ ಆಳ್ವ ಅಧ್ಯಕ್ಷರು, ಲಯನ್ಸ್ ಕ್ಲಬ್, ವಿಟ್ಲ, ಮತ್ತು ಕರುಣಾಕರ ಗೌಡ, ಅಧ್ಯಕ್ಷರು ಪಟ್ಟಣ ಪಂಚಾಯತು ವಿಟ್ಲ ಬಹುಮಾನ ವಿತರಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ವಿಸರ್ಜನಾ ಆರತಿ, ಅನ್ನಸಂತರ್ಪಣೆ ನಡೆದ ನಂತರ ಕರ್ನಾಟಕ ಕಲಾಶ್ರೀ ಡಾ| ಪ.ಕೆ. ದಾಮೋದರ್ ಮತ್ತು ಬಳಗದವರಿಂದ “ವಾದ್ಯಗೋಷ್ಠಿ” ಕಾರ್ಯಕ್ರಮ ನಡೆಯಿತು.



ಸಂಜೆ ಆಕರ್ಷಕ ಸ್ತಬ್ಧ ಚಿತ್ರದೊಂದಿಗೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆದ ಬಳಿಕ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ, “ವಂದೇ ಮಾತರಂ”, “ಧ್ವಜಾವತರಣ” ನಡೆದ ನಂತರ ಕೆರೆಯಲ್ಲಿ ಶ್ರೀ ದೇವಿಯ ವಿಗ್ರಹ ವಿಸರ್ಜನೆಯೋದಿಗೆ ವಿಟ್ಲ ಶಾರದೋತ್ಸವವು ಸಂಪನ್ನಗೊಂಡಿತು.



