



ವಿಟ್ಲ: 30 ವರ್ಷಗಳಿಂದ ಸಂಪರ್ಕ ರಸ್ತೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ವ್ಯಕ್ತಿಯೊಬ್ಬರು ಇದೀಗ ತನ್ನ ಸ್ವಂತ ಜಾಗದಿಂದ ಹತ್ತಾರು ದಲಿತ ಕುಟುಂಬಗಳಿಗೆ ರಸ್ತೆಗೆ ಜಾಗ ಬಿಟ್ಟು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.ಪೆರುವಾಯಿ ನಿವಾಸಿ ಅನ್ವರ್ ಎಂಬವರ ಕುಟುಂಬ 30 ವರ್ಷಗಳಿಂದ ತನ್ನ ಮನೆಗೆ ರಸ್ತೆ ಇಲ್ಲದೆ ಭಾರೀ ಸಂಕಷ್ಟ ಅನುಭವಿಸಿತ್ತು. ಇವೆಲ್ಲವನ್ನೂ ಮನಗಂಡ ಅನ್ವರ್ ತನ್ನ ಕುಟುಂಬ ಅನಾರೋಗ್ಯ, ಮನೆಯಲ್ಲಿ ನಡೆಯುವ ಶುಭಕಾರ್ಯ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಬೇರೆ ಯಾರೂ ಅನುಭವಿಸಬಾರದು ಎಂದು ತೀರ್ಮಾನಿಸಿ ತಾನು ಖರೀದಿಸಿದ ಜಾಗದಲ್ಲಿ ತನ್ನಂತೆ ಹಲವಾರು ವರ್ಷಗಳಿಂದ ರಸ್ತೆಗಾಗಿ ಪರಿತಪಿಸುತ್ತಿರುವ ಹತ್ತಾರು ದಲಿತ ಕುಟುಂಬಗಳಿಗೆ ರಸ್ತೆ ಜಾಗ ಬಿಟ್ಟು ಕೊಟ್ಟು ಮಾನವೀಯತೆ ಮೆರೆದ್ದಿದ್ದಾರೆ.
ಪೆರುವಾಯಿ ಗ್ರಾಪಂ ಅಧ್ಯಕ್ಷೆ ನೆಫೀಸಾ, ವಾರ್ಡ್ ಸದಸ್ಯೆ ರಶ್ಮಿಯವರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಸಂಪರ್ಕಿಸಿ ಈ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸುವಲ್ಲಿ ಸಫಲರಾದರು. ರಸ್ತೆ ಅಭಿವೃದ್ಧಿಗೆ ಸಫಿಯಾ ಕುದ್ರಡ್ಕ ದಿ.ಮುಹಮ್ಮದ್ ಹಾಜಿ ಕುಂಬಳಕೋಡಿ ಮತ್ತು ದಿ.ಮೊಯ್ದಿನ್ ಹಾಜಿ ದರ್ಕಾಸ್ ಕುಟುಂಬ ಸಹಕಾರ ನೀಡಿದೆ.ಈ ಬಗ್ಗೆ ವಾರ್ತಾಭಾರತಿ ಜತೆ ಮಾತನಾಡಿದ ಪೆರುವಾಯಿ ಗ್ರಾಪಂ ಅಧ್ಯಕ್ಷೆ ನೆಫೀಸಾ, ಈ ರಸ್ತೆಯಿಂದ ಅನ್ವರ್ರ ಕುಟುಂಬಕ್ಕೆ ಮಾತ್ರವಲ್ಲದೆ ಹತ್ತಾರು ದಲಿತ ಕುಟುಂಬಕ್ಕೆ ಸಹಕಾರಿಯಾಗಿದೆ. ಶಾಸಕರ 10 ಲಕ್ಷ ರೂ. ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಗೊಂಡಿದೆ ಎಂದರು.