ವಿಟ್ಲ ಅರಮನೆಯಲ್ಲಿ ಶ್ರೀ ದುರ್ಗಾ ತ್ರಿಕಾಲ ಪೂಜೆ ನಡೆಯಿತು.
ವಿಟ್ಲ ಅರಮನೆಯ ಭೂಮಿ ಅನುಭವಿಸುವ ಜನರು ದೇವಿಯ ಪ್ರೀತ್ಯರ್ಥವಾಗಿ ಹಾಗೂ ದೋಷ ಪರಿಹಾರಾರ್ಥವಾಗಿ ತ್ರಿಕಾಲ ಪೂಜೆಯನ್ನು ನಡೆಸಲಾಯಿತು. ಮಂಗಳವಾರ ಬೆಳಿಗ್ಗೆ ದೀಪಾರಾಧನೆಯ ಮೂಲಕ ತ್ರಿಕಾಲ ಪೂಜೆ ಆರಂಭವಾಯಿತು.
ಬಳಿಕ ಗಣಪತಿ ಹವನ, ರಾತ್ರಿ ಮಹಾಮಂಗಳಾರತಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಾಮೋದರ ಪಡಿಬಾಗಿಲು ಮತ್ತು ಬಳಗದವರಿಂದ ವಾದ್ಯಗೋಷ್ಠಿ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಸಾಯಂಕಾಲ ವಿಟ್ಲ ಸೀಮೆಯ ಚರಿತ್ರೆಯ ವಿಶೇಷ ಅಧ್ಯಯನ ನಡೆಸಿದ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅವರಿಂದ ಉಪನ್ಯಾಸ ನಡೆಯಿತು. ವಿಟ್ಲ ಅರಮನೆಯ ಬಂಗಾರು ಅರಸರ ಮಾರ್ಗದರ್ಶನದಲ್ಲಿ ಕುಂಟುಕುಡೇಲು, ವೇದಮೂರ್ತಿ ರಘುರಾಮ ತಂತ್ರಿ, ವೇದಮೂರ್ತಿ ಶ್ರೀವತ್ಸ ಕೆದಿಲಾಯ ನೇತೃತ್ವದಲ್ಲಿ ತ್ರಿಕಾಲ ಪೂಜೆ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತ್ರಿಕಾಲ ಪೂಜಾ ಸಮಿತಿಯ ಸಂಚಾಲಕ ಬಾಬು ಕೆ.ವಿಟ್ಲ ಹಾಗೂ ಪದಾಧಿಕಾರಿಗಳು ವಿಟ್ಲ ಸೀಮೆ ಗುರಿಕಾರರು, ಸೀಮೆಯ ಹಿರಿಯರು, ಪ್ರಮುಖರು ಹಾಗೂ ಸೀಮೆಯಾದ್ಯಂತದ ಸಹಸ್ರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.