ವಿಟ್ಲ: ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು ಪ್ರತಿ ಪ್ರಕರಣದಲ್ಲೂ ಇಬ್ಬರನ್ನು ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಅದೃಷ್ಟದ ಮಟ್ಕಾ ಆಟ – ಇಬ್ಬರು ವಶಕ್ಕೆ
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅದೃಷ್ಟದ ಮಟ್ಕಾ ಆಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಅಳಿಕೆ ಗ್ರಾಮದ ಮುಳಿಯ ನಿವಾಸಿ ರಾಕೇಶ್ ಶೆಟ್ಟಿ ಮತ್ತು ಬಂದ್ಯೋಡು ಮೂಲದ ಮಹೇಶ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ವಿದ್ಯಾ ಕೆ ಜೆ ರವರು, ಪೊಲೀಸ್ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರು ಫೋನ್ ಕರೆ ಮಾಡಿ ವಿಟ್ಲ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅದೃಷ್ಟದ ಮಟ್ಕಾ ಆಟ ಆಡುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆದೇಶಿಸಿದ ಮೇರೆಗೆ ದಾಳಿ ನಡೆಸಿದಾಗ ಈ ಕೃತ್ಯ ಬಯಲಾಗಿದೆ. ದಾಳಿ ನಡೆಸಿದಾಗ ರಾಕೇಶ್ ಶೆಟ್ಟಿ ಮತ್ತು ಮಹೇಶ್ ಎಂಬವರನ್ನು ಬಂಧಿಸಿ ಅವರಲಿದ್ದ ಒಟ್ಟು ಹಣ 1430/- ರೂಪಾಯಿ, ಮೊಬೈಲ್ ಫೋನ್-1, ಪೆನ್-1 ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುದ್ದುಪದವು ಜಂಕ್ಷನ್ ನಲ್ಲಿ ಮಟ್ಕಾ ಆಟ – ಇಬ್ಬರು ವಶಕ್ಕೆ
ಕುದ್ದುಪದವು ಜಂಕ್ಷನ್ ನಲ್ಲಿ ಮಟ್ಕಾ ಆಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಜು.21 ರಂದು ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷರಾದ ಕಾರ್ತಿಕ್ ಕೆ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಮಾಹಿತಿ ಮೇರೆಗೆ ವಿಟ್ಲ ಕೇಪು ಸಮೀಪದ ಕುದ್ದುಪದವು ಜಂಕ್ಷನ್ ನಲ್ಲಿ ದಿನಸಿ ಅಂಗಡಿಯಲ್ಲಿ ಮಟ್ಕಾ ಆಟ ಆಡಿಸುತ್ತಿದ್ದ ಜನಾರ್ಧನ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಜನಾರ್ಧನರವರ ಅಂಗಡಿಯ ಜಗಲಿಯಲ್ಲಿ ಜನರು ಸುತ್ತುವರಿದು ನಿಂತುಕೊಂಡಿದ್ದು ಅವರ ಪೈಕಿ ಒಬ್ಬಾತ ಚೀಟಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ. ದಾಳಿ ನಡೆಸಿದಾಗ ಹಣ ಕಟ್ಟಲು ಸೇರಿದವರು ಪೊಲೀಸರನ್ನು ಕಂಡು ಓಡಿ ಹೋಗಿದ್ದು ಚೀಟಿ ಬರೆಯುತ್ತಿದ್ದವನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ ಒಟ್ಟು ಹಣ 4,810/- ರೂಪಾಯಿ ಹಣ, ಮೊಬೈಲ್, ಪೆನ್ ಇತ್ಯಾದಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜನಾರ್ಧನ @ ರವಿಕುಮಾರ್ ಹಾಗೂ ರಂಜಿತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.