ಬರಸಡಿಲು ಬಡಿದ ಅನುಭವ ನಂಬಲು ಸಾಧ್ಯವಾಗದ ಕಠೋರ ಸತ್ಯ. ವರನಟ ಡಾ. ರಾಜಕುಮಾರ ಅವರ ಕುವರ ಬಾಲನಟ ಮಾಸ್ಟರ್ ಲೋಹಿತ್, ಅಪ್ಪು ಎಲ್ಲರ ಆಶಾಕಿರಣ ಪುನೀತ್ ರಾಜಕುಮಾರ ಅಸ್ತಂಗತ.
ಇಡೀ ವಿಶ್ವದ ಕಣ್ಮಣಿ ಅಪ್ಪು ಒಬ್ಬ ನಟನಾಗಿ ಮಾತ್ರವಲ್ಲ ಚಿತ್ರೋದ್ಯಮದ ಬೆಳವಣಿಗೆಗೆ ಕಾರಣೀಭೂತರಾಗಿ, ಪಿ.ಆರ್.ಕೆ ಪ್ರೊಡಕ್ಷನ್ ಮುಖೇನ ಸೃಜನಾತ್ಮಕ ಚಿತ್ರಗಳನ್ನು ನಿರ್ಮಿಸಿ ಪ್ರತಿಭಾ ಸಂಪನ್ನ ಯುವ ನಿರ್ದೇಶಕರನ್ನು ಗುರುತಿಸಿ, ಜೊತೆಗೆ ಕ್ರಿಯಾಶೀಲ ತಂತ್ರಜ್ಞರನ್ನು ಪ್ರೋತ್ಸಾಹಿಸಿ, ಅನೇಕ ಕಲಾವಿದರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದ ಅಪರಂಜಿ. ಅವರಿಂದಾಗಿ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ನನಗೆ ಪಾತ್ರವಹಿಸುವ ಭಾಗ್ಯ ಲಭಿಸಿತ್ತು.
ನಾನು ಕಂಡಂತೆ ಶಂಕರನಾಗ್ ಅವರಂತೆ ಸೃಜನಶೀಲ ಕ್ರಿಯಾಶೀಲ ಹೃದಯವಂತ ಯುವರತ್ನ ಅವರಾಗಿದ್ದರು.
“ಒಬ್ಬ ಮನುಷ್ಯ ಎಷ್ಟು ವರ್ಷ ಬದುಕಿದ ಎಂಬುದು ಮುಖ್ಯವಲ್ಲ. ಆದರೆ ಆತ ಬದುಕಿದಷ್ಟು ವರ್ಷ ಹೇಗೆ ಬದುಕಿದ ಎಂಬುದು ಮುಖ್ಯ. ಆ ರೀತಿ ಬದುಕಿ ಬಾಳಿದ ಅಪರಂಜಿ ಪುನೀತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರಿಗೆ ಶಾಶ್ವತ ವಿಷ್ಣು ಸಾನಿಧ್ಯ ಪ್ರಾಪ್ತವಾಗಲಿ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.