ವಿಟ್ಲ: ಮಾನಸಿಕ ಅಸ್ವಸ್ಥ ಯುವತಿ ನಾಪತ್ತೆಯಾದ ಘಟನೆ ವಿಟ್ಲ ಬೋಳಂತೂರು ಗ್ರಾಮದ ಶಾಂತಿಮೂಲೆಯಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿ ಬೋಳಂತೂರು ಗ್ರಾಮದ ಶಾಂತಿಮೂಲೆ(ಕೋಡಪದವು ಸಮೀಪದ) ನಿವಾಸಿ ಶಂಸೀನಾ(25) ಎಂದು ಗುರುತಿಸಲಾಗಿದೆ.
ಹಲವು ಸಮಯಗಳಿಂದ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ ಶಂಸೀನಾ ಇದೇ ತಿಂಗಳ 15ರಂದು ರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. 15 ರಂದು ರಾತ್ರಿ 10:30 ರ ಸುಮಾರಿಗೆ ಶಂಸೀನಾ ಮನೆ ಪರಿಸರದಲ್ಲಿ ಆಟೋರಿಕ್ಷಾವೊಂದು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ತಪಾಸಣೆ ನಡೆಸಲು ಮುಂದಾಗಿದ್ದರು. ಆ ಸಂದರ್ಭ ಅಪರಿಚಿತರಿಬ್ಬರು ಗುಡ್ಡದಿಂದ ಇಳಿದು ಬಂದಿದ್ದು ತಕ್ಷಣವೇ ಸ್ಥಳೀಯರು ವಿಚಾರಿಸಿದ್ದಾರೆ. ಆ ಸಂದರ್ಭ ಗುಡ್ಡದಿಂದ ಇಳಿದು ಬಂದಿದ್ದ ಇಬ್ಬರ ಪೈಕಿ ಒಬ್ಬಾತ ಕೊಳ್ನಾಡು ಗ್ರಾಮದ ಸೆರ್ಕಳ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಕೆ.ಅಶ್ರಫ್ ಯಾನೆ ಮಂಡೆ ಅಶ್ರಫ್ ಹಾಗೂ ಆತನ ಜೊತೆಗಿದ್ದವನನ್ನು ಸೆರ್ಕಳ ನಿವಾಸಿ ಷರೀಫ್ ಎಂದು ಪರಿಚಯಿಸಿಕೊಂಡಿದ್ದಾರೆ.
ಸೆರ್ಕಳದಿಂದ ಇಲ್ಲಿಗೆ ಯಾಕೆ ತಡರಾತ್ರಿ ಬಂದಿದ್ದೀರಿ ಎಂದು ಪ್ರಶ್ನಿಸುತ್ತಾ ಸ್ಥಳೀಯರು ಇವರಿಬ್ಬರನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಸುದ್ಧಿ ತಿಳಿದು ಪರಿಸರದ ಜನ ಜಮಾಯಿಸಿದ್ದಾರೆ. ಸಿಕ್ಕಿಬಿದ್ದು ಒದೆ ಬೀಳುವ ಅಪಾಯವನ್ನರಿತ ಕಿರಾತಕರಿಬ್ಬರೂ ದೂರದಲ್ಲಿ ನಿಲ್ಲಿಸಿದ್ದ ಆಟೋದೊಂದಿಗೆ ಪರಾರಿಯಾಗಿದ್ದಾರೆ. ಆ ಬಳಿಕ ಸಂಶಯಗೊಂಡ ಸ್ಥಳೀಯರು ವಿಚಾರಿಸುವುದಕ್ಕಾಗಿ ಯುವತಿಯ ಮನೆಗೆ ತೆರಳಿದಾಗ ಶಂಸೀನಾ ನಾಪತ್ತೆಯಾಗಿದ್ದಳೆ ಎನ್ನಲಾಗಿದೆ. ತಕ್ಷಣವೇ ಎಲ್ಲಾ ಕಡೆ ಹುಡುಕಾಡಿದ್ದರೂ ಯುವತಿಯಾಗಲೀ, ಆಕೆಯ ಮನೆ ಪರಿಸರದಲ್ಲಿ ಸಿಕ್ಕಿಬಿದ್ದ ಕಿರಾತಕರಾಗಲೀ ಪತ್ತೆಯಾಗಿಲ್ಲ.
ಆರೋಪಿಗಳ ಪೈಕಿ ಮಂಡೆ ಅಶ್ರಫ್ ಈ ಹಿಂದೆಯೂ ಇದೇ ರೀತಿಯ ಅನಾಗರಿಕ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ವರ್ಷದ ಹಿಂದಷ್ಟೇ ಇದೇ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಡೆ ಅಶ್ರಫ್ ಮತ್ತೋರ್ವನ ಜೊತೆ ಉಪ್ಪಿನಂಗಡಿ ಪರಿಸರದ ಯುವತಿಯೊಬ್ಬಳ ಮನೆಗೆ ತಡರಾತ್ರಿಯಲ್ಲಿ ನುಗ್ಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಬೆಳಗ್ಗಿನವರೆಗೂ ಒದೆ ತಿಂದಿದ್ದಾನೆಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಇಬ್ಬರ ವಿರುದ್ದ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಸಂಬಂಧ ಪಟ್ಟವರನ್ನು ವಿಚಾರಣೆ ನಡೆಸಿ ಯುವತಿಯನ್ನು ಪತ್ತೆಹಚ್ಚಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.