ಅನಿವಾರ್ಯತೆ ಬಂದಲ್ಲಿ ಘಟಕವನ್ನು ಬೇರೆ ಕಡೆ ಸ್ಥಳಾಂತರ ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ: ಶಾಸಕ ಅಶೋಕ್ ಕುಮಾರ್ ರೈ


ವಿಟ್ಲ ಕಸಬಾ ಗ್ರಾಮ ಕಾಶಿ ಮಠ ಅಪ್ಪೆರಿಪಾದೆಯಲ್ಲಿ ಕಾರ್ಯಾಚರಿಸುತ್ತಿರುವ ರೈತ ಸಂಪರ್ಕ ಕೇಂದ್ರ ಕಟ್ಟಡದ ಬಳಿ ನಿರ್ಮಾಣವಾಗುತ್ತಿರುವ, ಶೌಚ ತ್ಯಾಜ್ಯ ಘಟಕದ ಬಗ್ಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈಯವರು ಶೌಚ ತ್ಯಾಜ್ಯ ಘಟಕ ನಿರ್ಮಾಣ ಜಾಗಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಒಂದುವರೆ ವರ್ಷಗಳಿಂದ ವಿಟ್ಲ-ಕಾಶಿಮಠ ಅಪ್ಪೇರಿಪಾದೆಯಲ್ಲಿ ಕಾರ್ಯಾಚರಿಸುತ್ತಿರುವ ರೈತ ಸಂಪರ್ಕ ಕೇಂದ್ರಕ್ಕೆ ದಿನದಲ್ಲಿ ಸುಮಾರು 100 ರಿಂದ 150 ರೈತ ಬಂಧುಗಳು ಭೇಟಿ ನೀಡುತ್ತಿದ್ದು, ಈ ಪರಿಸರದಲ್ಲಿ ಶೌಚ ತ್ಯಾಜ್ಯ ಘಟಕ ನಿರ್ಮಾಣವಾದರೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗ ಹಾಗೂ ಅಧಿಕಾರಿ ವೃಂದ ಹಾಗೂ ಎಲ್ಲಾ ರೈತ ಬಂಧುಗಳು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಬಹುದು. ಜೊತೆಗೆ ಆರೋಗ್ಯ ಹದಗೆಟ್ಟು, ಎಲ್ಲರಲ್ಲೂ ಅನಾರೋಗ್ಯ ಸ್ಥಿತಿ ಕಾಡಬಹುದು. ಆದುದರಿಂದ ಬಗ್ಗೆ ಪಟ್ಟಣ ಪಂಚಾಯತ್ ಸೂಕ್ತ ಕ್ರಮ ಕೈಗೊಂಡು ತಕ್ಷಣ ಈ ಘಟಕವನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸುವಂತೆ ಪಟ್ಟಣ ಪಂಚಾಯತ್ ನ ಮುಖ್ಯ ಅಧಿಕಾರಿಯವರಿಗೆ ಈ ಬಗ್ಗೆ ಕೃಷಿ ನಿರ್ದೇಶಕರು ಮನವಿ ನೀಡಿದ್ದರು.
ಇಂದು ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮದ ನಿಮಿತ್ತ ಅಪ್ಪೇರಿಪಾದೆ ರಸ್ತೆಯಲ್ಲಿ ಸಂಚರಿಸುವ ವೇಳೆ ಶೌಚ ತ್ಯಾಜ್ಯ ಘಟಕ ನಿರ್ಮಾಣ ಜಾಗಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಂಪರ್ಕ ಕೇಂದ್ರದ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಇಲ್ಲಿ ಯಾವುದೇ ಕಾರಣಕ್ಕೂ ಈ ಘಟಕವನ್ನು ಸ್ಥಾಪಿಸಬಾರದು, ಈ ಬಗ್ಗೆ ತಾವು ಗಮನ ಹರಿಸಿ ಬೇರೆ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ’ ಈ ಘಟಕವನ್ನು ಈ ಪರಿಸರದಲ್ಲಿ ಸ್ಥಾಪಿಸುವ ಮೊದಲು ಸಾರ್ವಜನಿಕರಲ್ಲಿ ಮನವರಿಕೆ ಮಾಡಿ ಮುಂದಕ್ಕೆ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು, ಇಲ್ಲವಾದಲ್ಲಿ ಈ ಪರಿಸರದ ಎಲ್ಲಾ ಜನರಲ್ಲೂ ಗೊಂದಲಗಳು ಸೃಷ್ಟಿಯಾಗುತ್ತದೆ. ಎಲ್ಲಾ ಸಾದಕ-ಭಾದಕಗಳನ್ನು ನೋಡಿಕೊಂಡು ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಮುಂದುವರೆಯಬೇಕು. ಇದರಲ್ಲಿ ಯಾವುದೇ ರಾಜಕೀಯ ವಿಚಾರಗಳಿಲ್ಲ. ಅಭಿವೃದ್ಧಿಯಾಗಬೇಕು, ಆದರೆ ಇದರಿಂದ ಜನರಿಗೆ ಯಾವುದೇ ತೊಂದರೆಯಾಗಬಾರದು. ಬೇರೆ ಕಡೆಗೆ ಈ ಘಟಕವನ್ನು ಸ್ಥಳಾಂತರಿಸುವ ಬಗ್ಗೆ ಅಥವಾ ಯಾವ ರೀತಿ ಮನವರಿಕೆ ಮಾಡಬಹುದು ಎಲ್ಲದುದರ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಜನರು ನಮ್ಮನ್ನು ಆರಿಸಿ ನಮ್ಮ ಕೈಯಲ್ಲಿ ಅಧಿಕಾರ ನೀಡಿರುವುದು ಯಾರಿಗೂ ಯಾವುದರಲ್ಲೂ ತೊಂದರೆಯಾಗಬಾರದು ಎನ್ನುವ ದೃಷ್ಟಿಯಲ್ಲಿ. ಮುಂದಿನ ದಿನಗಳಲ್ಲಿ ಅನಿವಾರ್ಯತೆ ಬಂದಲ್ಲಿ ಈ ಘಟಕವನ್ನು ಬೇರೆ ಕಡೆ ಸ್ಥಳಾಂತರ ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್ನ ಎಲ್ಲಾ ಆಡಳಿತ ಪಕ್ಷದ ಪ್ರಮುಖರನ್ನು ಗಮನದಲ್ಲಿರಿಸಿಕೊಂಡು ಮುಂದಿನ ದಿನಗಳಲ್ಲಿ ಯಾರಿಗೂ ತೊಂದರೆಯಾಗದಂತೆ ನಿರ್ಮಾಣ ಕಾರ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.