



ವೃದ್ದನಿಗೆ ಸೇರಬೇಕಾದ ಜಾಗದ ದಾಖಲೆಗಳನ್ನು ಜುಲೈ 30 ರ ಒಳಗಾಗಿ ಹಿಂತಿರುಗಿಸಿಕೊಡುವಂತೆ ತಹಶೀಲ್ದಾರ್-ಜಿಲ್ಲಾಧಿಕಾರಿ ಭರವಸೆ
ವಿಟ್ಲ: ಪರಿಶಿಷ್ಟ ಜಾತಿಯ ಬಡಕುಟುಂಬವೊಂದಕ್ಕೆ ಸರ್ಕಾರ ನೀಡಿದ ಒಂದು ಎಕರೆ ಕೃಷಿ ಭೂಮಿಯನ್ನು ಆ ಕುಟುಂಬದ ಮಾಲೀಕ ಮತ್ತೆ ಅದೇ ಭೂಮಿಯನ್ನು ಸರ್ಕಾರಕ್ಕೆ ನೀಡಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ವಿಟಿವಿ ಕಳೆದ ಕೆಲ ವಾರಗಳ ಹಿಂದೆ ವರದಿ ಭಿತ್ತರಿಸಿತ್ತು. ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಳಪದವು ಮಾಂಕು ಕೊರಗ ಎಂಬವರಿಗೆ 2010 ರಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಇವರಿಗೆ ಸರ್ವೇ ನಂ. 283 ಮತ್ತು 282 ರಲ್ಲಿ ಒಂದು ಎಕ್ರೆ ಕೃಷಿ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ಈ ಬಡವೃದ್ಧನಿಗೆ ಈ ಜಾಗದ ಕೆಲ ದಾಖಲೆಗಳನ್ನು ಮಾತ್ರ ಸರ್ಕಾರ ನೀಡಿದ ಕಾರಣ ಈ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸದಂತೆ ಸಮಸ್ಯೆ ಎದುರಾಗಿತ್ತು. ’ಜಾಗದ ನಕ್ಷೆ ಮತ್ತು ನಡಾವಳಿಯನ್ನು ಗಡಿಗುರುತಿಗೆ ಅಳತೆ ಮಾಡಲು ಕೇಳಿದಾಗ ನಾನು ನೀಡಿದ್ದೇನೆ. ನಾನು ನೀಡಿದ ದಾಖಲೆಗಳನ್ನು ಮತ್ತೆ ನನಗೆ ಹಿಂತಿರುಗಿಸಲಲ್ಲ. ಈ ರೀತಿಯಾಗಿ ನನ್ನ ಭೂಮಿಯನ್ನು ಕಬಳಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದರಿಂದ ಮನನೊಂದ ನಾನು ಮತ್ತೆ ನನ್ನ ಜಾಗವನ್ನು ಸರ್ಕಾರಕ್ಕೆ ಹಿಂತಿರುಗಿಸಲು ತೀರ್ಮಾನ ಮಾಡಿದ್ದೇನೆ. ಒಂದು ವೇಳೆ ಸರಿಯಾದ ದಾಖಲೆಯನ್ನು ಒದಗಿಸಿದರೆ ಅದರಲ್ಲಿ ಕೃಷಿ ಮಾಡಿ ಜೀವನ ನಡೆಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದರು.
ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ದೇವಿ ಪ್ರಸಾದ್ ಶೆಟ್ಟಿ ಬೆಂಞಂಣ್ತಿಮಾರ್ ಗುತ್ತು ಹಾಗೂ ಧನಂಜಯ ಪಾದೆ ಇವರು ’ಮಾಂಕು ಕೊರಗ ಎಂಬವರಿಗೆ ಸೇರಬೇಕಾದ ಎಲ್ಲಾ ದಾಖಲೆಗಳನ್ನು ಒಂದು ವಾರದಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಯವರು ಹಿಂತಿರುಗಿಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು’ ಎಂದು ಆಗ್ರಹಿಸಿದ್ದರು. ಈ ಬಗ್ಗೆ ಬಡ ವೃದ್ಧನಿಗೆ ಸೇರಬೇಕಾದ ಸರ್ಕಾರ ನೀಡಿದ ಜಾಗದ ಎಲ್ಲಾ ದಾಖಲೆಗಳನ್ನು ಶೀಘ್ರವಾಗಿ ದೊರಕಿಸಿಕೊಡುವಂತೆ ವಿಟಿವಿ ವರದಿ ಭಿತ್ತರಿಸಲಾಗಿತ್ತು.
ಇದೀಗ ಈ ವರದಿಯ ಫಲಶ್ರುತಿಯಂತೆ ಬಡ ವೃದ್ಧನಿಗೆ ಸೇರಬೇಕಾದ ಜಾಗದ ಎಲ್ಲಾ ದಾಖಲೆಗನ್ನು ಜುಲೈ 30 ರ ಒಳಗಾಗಿ ಹಿಂತಿರುಗಿಸಿಕೊಡುವಂತೆ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಸಾಮಾಜಿಕ ಹೋರಾಟಗಾರರಾಗಿದ್ದ ಧನಂಜಯ ಪಾದೆ ಮತ್ತು ದೇವಿಪ್ರಸಾದ್ ಶೆಟ್ಟ ಬೆಂಞಣ್ತಿಮಾರ್ ಇವರ ಹೋರಾಟಕ್ಕೆ ಕೊನಗೂ ಜಯ ಸಿಕ್ಕಂತಾಗಿದೆ. ಈ ಫಲಶ್ರುತಿಯಲ್ಲಿ ಮಾಜಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಮಾಧವ ಮಾವೆ ಎಲ್ಲಾ ರೀತಿಯ ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಮಾಂಕು ಕೊರಗನ ಮನೆಗೆ ಭೇಟಿ ನೀಡಿ ಅಲ್ಲಿಂದ ವೀರಕಂಭ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿ, ಸರಿಯಾದ ದಾಖಲೆ ನೀಡುವಂತೆ ಅಧಿಕಾರಿಗಳ ಬೆನ್ನುಹಿಡಿದಿದ್ದರು. ಮುಂದಿನ ಹಂತವಾಗಿ ಮಾನ್ಯ ತಹಶೀಲ್ದಾರರನ್ನು ಭೇಟಿ ಮಾಡಿ ತಾಲೂಕು ಪಂಚಾಯತ್ನಲ್ಲಿ ಕಡತಗಳು ಇರದೇ ಇರುವುದರಿಂದ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಕಾರ್ಯ ಪ್ರವೃತ್ತರಾರಿ ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಈ ತಿಂಗಳಿನೊಳಗೆ ಹಿಂತಿರುಗಿಸಿಕೊಡುವಂತೆ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಮಾಜಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾಧವ ಮಾವೆ ಇವರ ಕಾರ್ಯಕ್ಕೆ ಸಾಮಾಜಿಕ ಹೋರಾಟಗಳು ಶ್ಲಾಘನೆ ವ್ಯಕ್ತಪಡಿಸಿವೆ.