





ವಿಟ್ಲ: ವಿಟ್ಲ-ಪೆರ್ಲ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನಗಳನ್ನು ಗುರಿಯಾಗಿಸಿಕೊಂಡು ದರೋಡೆಗೈಯುವ ಖದೀಮರ ತಂಡ ಚಟುವಟಿಕೆ ನಡೆಸುತ್ತಿರುವ ಘಟನೆ ವರದಿಯಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಸಾರಡ್ಕ ಚೆಕ್ಪೋಸ್ಟ್ ಕಳೆದ ತಿರುವಿನಲ್ಲಿ ಈ ಘಟನೆಗಳು ಸಂಭವಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾತ್ರಿ ಹತ್ತು ಗಂಟೆಯ ನಂತರ ದರೋಡೆ ಗ್ಯಾಂಗ್ ಆಕ್ಟಿವ್ ಆಗುತ್ತದೆಯೆಂದೂ ತಂಡದ ನಾಲ್ವರು ವ್ಯಕ್ತಿಗಳಲ್ಲಿ ಒಬ್ಬನು ರಸ್ತೆಯಲ್ಲಿ ಬಿದ್ದಂತೆಯಾಗಿ ನಟನೆ ಮಾಡುತ್ತಾನೆ. “ಅಪಘಾತವಾಗಿದೆ, ದಯವಿಟ್ಟು ಸಹಾಯ ಮಾಡಿ” ಎಂದು ಕೇಳಿಕೊಳ್ಳುತ್ತಾನೆ. ಈ ದೃಶ್ಯ ನೋಡಿ ಕಾರು ನಿಲ್ಲಿಸಿದ ಚಾಲಕರನ್ನು ಉಳಿದ ಮೂವರು ಚಾಕು ತೋರಿಸಿ ಬೆದರಿಸಿ, ಹಣ, ಮೊಬೈಲ್ ಮತ್ತು ಇತರ ಮೌಲ್ಯವಸ್ತುಗಳನ್ನು ದರೋಡೆ ಮಾಡುತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಇಂತಹ ಘಟನೆಯೊಂದು ನಿನ್ನೆ ರಾತ್ರಿ ನಡೆದಿದ್ದು, ಇದಕ್ಕೂ ಮೊದಲು ಕೆಲವು ದಿನಗಳ ಹಿಂದೆಯೂ ಇದೇ ರೀತಿಯ ದರೋಡೆ ಪ್ರಯತ್ನ ನಡೆದಿತ್ತು ಎಂದು ಆ ದಾರಿಯಲ್ಲಿ ಸಂಚರಿಸುವವರು ಜಾಗೃತೆಯಿಂದ ಇರಿ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಭೀತಿ ಮನೆಮಾಡಿದ್ದು, ಈ ಮಾರ್ಗದಲ್ಲಿ ರಾತ್ರಿ ಸಂಚರಿಸುವವರು ಎಚ್ಚರಿಕೆಯಿಂದಿರಿ.
ಆದರೆ ನಿನ್ನೆ ನಡೆದ ಘಟನೆಯು ದರೋಡೆ ಅಲ್ಲ ಬೈಕ್ ಸ್ಕಿಡ್ ಅದದೆಂದೂ ಸುದ್ದಿ ಇದೀಗ ಸ್ಥಳೀಯರಿಂದ ಕೇಳಿ ಬರುತ್ತಿದೆ. ಆದ್ದರಿಂದ ಇದರ ಕುರಿತಾದ ನಿಖರ ಮಾಹಿತಿಗಾಗಿ ಸರಿಯಾದ ತನಿಖೆ ನಡೆಯಬೇಕೆಂದು ಸಾರ್ವಜನಿಕರು ಕೇರಳ ಪೊಲೀಸರಲ್ಲಿ ಮನವಿ ಮಾಡುತ್ತಿದ್ದಾರೆ.