ಪುತ್ತೂರು: ಕಲಿಕೆ ಒಂದು ನಿರಂತರ ಕ್ರಿಯೆ. ಸಮಯಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಪ್ರತಿಯೊಬ್ಬ ಅಧ್ಯಾಪಕನು ಶ್ರೇಷ್ಠತೆಯ ಹಾದಿಯಲ್ಲಿ ಮನ್ನಡೆಯಲು ಆ ಬಗೆಗೆ ನಮ್ಮನ್ನು ನಾವು ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳಲು ತರಬೇತಿ ಕಾರ್ಯಾಗಾರಗಳು ಸಹಾಯ ಮಾಡುತ್ತವೆ. ಬೋಧಿಸಿದ ವಿಚಾರಗಳು ವಿದ್ಯಾರ್ಥಿಗಳ ದೈನಂದಿನ ಬದುಕಿನಲ್ಲಿ ಉಪಯೋಗವಾಗುವಂತಾಗಬೇಕು ಎಂದು ಹರ್ಮನ್ ಕನೆಕ್ಟೆಡ್ ಸರ್ವೀಸ್ನ ಹಿರಿಯ ಸಾಪ್ಟ್ವೇರ್ ಇಂಜಿನಿಯರ್ ಅಕ್ಷತಾ ಭಟ್ ಟಿ.ಪಿ ಹೇಳಿದರು.

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಕಾಲೇಜಿನ ಉಪನ್ಯಾಸಕರುಗಳಿಗೆ ಆಯೋಜಿಸಲಾಗಿರುವ ತಂತ್ರಜ್ಞಾನ ಆಧಾರಿತ ಮಾಹಿತಿ ತರಬೇತಿ ಕಾರ್ಯಕ್ರಮದ ದ್ವೀಪ ಪ್ರಜ್ವಲಿಸಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯಾವುದೇ ತರಬೇತಿಗಳು ಯಶಸ್ವಿಯಾಗುವುದು ವಿಷಯದ ಬಗೆಗಿನ ಆಸಕ್ತಿ ಮತ್ತು ಹೊಸ ವಿಷಯಗಳನ್ನು ಕಲಿಯುವ ತುಡಿತ ಇದ್ದಾಗ ಮಾತ್ರ. ವೇಗದಿಂದ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ನಮ್ಮನ್ನು ನಾವು ತೊಡಗಿಸಿಕೊಂಡು ತಂತ್ರಜ್ಞಾನಗಳನ್ನು ಕಲಿಯುತ್ತಾ ನಾವೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಮಾತನಾಡಿ ಶಿಕ್ಷಣವೆಂದರೆ ಬರೇ ಮಾಹಿತಿಯನ್ನು ಪೇರಿಸುವ ಕ್ರಿಯೆಯಲ್ಲ. ವಿದ್ಯಾರ್ಥಿಗಳಲ್ಲಿ ಈಗಾಗಲೇ ಇರುವಂಥ ಸತ್ವವನ್ನು ಅರಳಿಸುವ ಪ್ರಕ್ರಿಯೆ. ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ, ಅವನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರದ್ದು. ಆದ್ದರಿಂದ ಅವರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರೊಂದಿಗೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು.ಈ ಮೂಲಕ ಆತ್ಮವಿಶ್ವಾಸದ ಭಾವನೆಗೆ ದಾರಿ ಮಾಡಿಕೊಡಬೇಕು. ಪ್ರತಿಯೊಬ್ಬ ಅಧ್ಯಾಪಕನೂ ತಮ್ಮಲ್ಲಿ ಹೊಸತನವನ್ನು ಮೈಗೂಡಿಸಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಪ್ರಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ದೇವಿಚರಣ್ ರೈ ಉಪಸ್ಥಿತರಿದ್ದರು.

ಉಪನ್ಯಾಸಕಿ ದಿವ್ಯರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಗಾಯತ್ರಿ ವಂದಿಸಿದರು. ಒಟ್ಟು ಮೂರು ದಿವಸಗಳ ಕಾಲ ಈ ತರಬೇತಿ ಕಾರ್ಯಕ್ರಮವು ನಡೆಯಲಿದ್ದು ಇದರಲ್ಲಿ ಪದ ಮತ್ತು ಎಕ್ಸೆಲ್ ರಚನೆ, ಪವರ್ ಪೊಯಿಂಟ್, ನುಡಿ, ಯುಟ್ಯೂಬ್ ಚಾನೆಲ್ ರಚನೆ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮತ್ತು ಸಂಪಾದನೆ ಮಾಡುವ ಬಗ್ಗೆ ಕಾಲೇಜಿನ ಗಣಕವಿಜ್ಞಾನ ಉಪನ್ಯಾಸಕರಿಂದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.
