





ಮಂಗಳೂರು : ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅನ್ವರ್ ಮಾಣಿಪ್ಪಾಡಿ, ಸಿದ್ದರಾಮಯ್ಯ ಹೇಳಿರುವುದು ಶೇ.90 ಸುಳ್ಳು. ಕಾಂಗ್ರೆಸ್ನವರೇ ಲಂಚದ ಆಮಿಷವೊಡ್ಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಿ.ವೈ.ವಿಜಯೇಂದ್ರ ನನಗೆ ಯಾವುದೇ ಲಂಚದ ಅಮಿಷವೊಡ್ಡಿಲ್ಲ. 2012-13ರಲ್ಲಿ ವಿಜಯೇಂದ್ರ ಯಾರು ಅಂತಾನೆ ನನಗೆ ಗೊತ್ತಿರಲಿಲ್ಲ. ಅಂದು ಕಾಂಗ್ರೆಸ್ನ ಸಾಕಷ್ಟು ಜನರು ಲಂಚದ ಅಮಿಷವೊಡ್ಡಿದ್ದರು. ವರದಿ ಜಾರಿ ಮಾಡಲು ಬಿಜೆಪಿ ಮುಂದಾಗಿದ್ದು ನಿಜ. ಪ್ರಧಾನಮಂತ್ರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೆ. ಆದರೆ ಬಿಜೆಪಿಯಿಂದ ನನಗೆ ಯಾವುದೇ ಲಂಚದ ಅಮಿಷ ಬಂದಿಲ್ಲ. ವರದಿ ಅನುಸಾರ ಸಿಬಿಐಗೆ ಕೊಟ್ಟರೆ ಕಾಂಗ್ರೆಸ್ಸಿಗರ ಬುಡಕ್ಕೆ ಬರುತ್ತೆ. ಹೀಗಾಗಿ ಈ ವಿಚಾರವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿಎಂ, ಪ್ರಿಯಾಂಕ್ ಖರ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.