ಮಂಗಳೂರು : ಲಂಚದ ಹಣ ಸ್ವೀಕಾರ ಮಾಡುವಾಗ ಜಮೀನು ಸರ್ವೆಯರ್ ಒಬ್ಬರು ರೆಡ್ ಹ್ಯಾಂಡಾಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿ ನಡೆದಿದೆ.
ಶೀತಲ್ ರಾಜ್ ಬಂಧಿತ ಆರೋಪಿಯಾಗಿದ್ದಾನೆ.
ಜಮೀನಿನ ಪಹಣಿಯಲ್ಲಿನ ಹೆಸರನ್ನು ತೆಗೆಯಲು ನಿಯಮದಂತೆ ಜಮೀನನ್ನು ಸರ್ವೆ ಮಾಡಿ ನಕ್ಷೆ ತಯಾರಿಸಿ ತತ್ಕಾಲ್ ಪೋಡಿ ಮುಖಾಂತರ ತೆಗೆಯುವ ಪ್ರಕ್ರೀಯೆ ಇರುತ್ತದೆ.
ಗುರುಪುರ ಹೋಬಳಿಯಲ್ಲಿರುವ ನೀರುಮಾರ್ಗ ಗ್ರಾಮದ ಲಿಲ್ಲಿ ಪೀಟರ್ ವಾಸ್ ಅವರಿಗೆ ವಯಸ್ಸಾಗಿದ್ದು ಆರೋಗ್ಯ ಸರಿ ಇಲ್ಲದ ಕಾರಣ ಅವರ ಪರವಾಗಿ ಸ್ಟೆಲ್ಲಾ ಜನೆಟ್ ವಾಸ್ ಇವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್ ಲೈನ್ ಮುಖಾಂತರ ಜಮೀನಿನ ತಾತ್ಕಾಲ್ ಪೋಡಿಗಾಗಿ ಅರ್ಜಿ ಸಲ್ಲಿಸಿ ಇದಕ್ಕಾಗಿ 1500 ರೂ ಯನ್ನು ಪವಾತಿ ಮಾಡಿ ರಶೀದಿ ಪಡೆದಿದ್ದರು.
ಅದರಂತೆ ಫೆಬ್ರವರಿ 29 ರಂದು ಮಂಗಳೂರಿನ ಸರ್ವೇ ಇಲಾಖೆಯಲ್ಲಿ ಕೆಲಸ ಮಾಡುವ ಶೀತಲ್ ರಾಜ್ ಎಂಬ ಸರ್ವೆಯರ್ ಜಮೀನಿನ ಸರ್ವೆ ನಡೆಸಿ ಸ್ಥಳ ಮಹಜರು ಮಾಡಿಕೊಂಡಿದ್ದರು. ಬಳಿಕ ಜಮೀನಿನ ನಕ್ಷೆ ನೀಡಲು ಹಣದ ಅವಶ್ಯಕತೆ ಇದೆ ಎಂದು ಆರಂಭದಲ್ಲಿ 5 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಬಳಿಕ ಅದನ್ನು ನಾಲ್ಕು ಸಾವಿರ ರೂಪಾಯಿಗೆ ಇಳಿಸಿದ್ದ. ಈ ಬಗ್ಗೆ ಸ್ಟೆಲ್ಲಾ ಜನೆಟ್ ವಾಸ್ ರರು ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿ ನಾಲ್ಕು ಸಾವಿರ ಲಂಚದ ಹಣ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರು ಆರೋಪಿ ಶೀತಲ್ ರಾಜ್ ನನ್ನು ಬಂಧಿಸಿದ್ದಾರೆ.