ವಿಟ್ಲ(ಅ.28): ಎಡನೀರು ಮಠದ ನೂತನ ಪೀಠಾಧಿಪತಿಯಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಪೀಠಾರೋಹಣಗೈದ ಕಾರ್ಯಕ್ರಮ ಎಡನೀರು ಮಠದಲ್ಲಿ ಇಂದು ನಡೆಯಿತು.
ಎಡನೀರು ಮಠದ ಪೀಠಾಧಿಪತಿಯಾಗಿದ್ದ ಕೇಶವಾನಂದ ಭಾರತೀ ಸ್ವಾಮೀಜಿಯವರು ದೇಹಾಂತರಾದುದರಿಂದ ಜಯರಾಮ ಮಂಜತ್ತಾಯರನ್ನು ಉತ್ತರಾಧಿಕಾರಿಯಾಗಿ ಆರಿಸಿ, ಅವರಿಗೆ ಅ.26ರಂದು ಕಂಚಿ ಕಾಮಕೋಟಿ ಪೀಠಾಧಿಪತಿಯವರು ಸನ್ಯಾಸಿ ದೀಕ್ಷೆ ನೀಡಿ, ಸಚ್ಚಿದಾನಂದ ಭಾರತೀ ಸ್ವಾಮೀಜಿಯವರೆಂದು ನಾಮಕರಣಗೈದಿದ್ದರು.
ಸಚ್ಚಿದಾನಂದ ಸ್ವಾಮೀಜಿಯವರ ಪುರಪ್ರವೇಶ ಕಾರ್ಯಕ್ರಮ ಅ.27ರಂದು ನಡೆದು, ಇಂದು (ಅ.28) ಪೀಠಾರೋಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಡುಪಿಯ ಪರ್ಯಾಯ ಪೀಠಾಧಿಪತಿಯವರಾದ ಪಲಿಮಾರು ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಕಾಸರಗೋಡು ಸಂಸದರಾದ ರಾಜ್ ಮೋಹನ್ ಉಣ್ಣಿತ್ತಾನ್, ಕರ್ನಾಟಕದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಂಚಿ ಕಾಮಕೋಟಿ ಮಠದ ಪ್ರತಿನಿಧಿಗಳು ಪೀಠಾರೋಹಣ ವಿಧಿವಿಧಾನ ನೆರವೇರಿಸಿದ್ದರು.
ಚಿನ್ಮಯ ಆಶ್ರಮದ ವಿವಿಕ್ತಾನಂದ ಸ್ವಾಮೀಜಿ, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಕೊಲ್ಲೂರು, ಕಟೀಲು, ಬಾಳೆಕುದ್ರು, ತಿರುವನಂತಪುರ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಯಕ್ಷಗಾನ, ಸಂಗೀತ ಆರಾಧಾನೆ ನಡೆಯಿತು. ಪೀಠಾರೋಹಣಕ್ಕೆ ಮುಂಚಿತವಾಗಿ ವಿವಿಧ ಅಭಿಷೇಕ ನಡೆಯಿತು. ನಂತರ ಹಲವು ಗಣ್ಯರು ಪಾದಪೂಜೆ ನಡೆಸಿದರು. ಪೀಠಾರೋಹಣ ಸಮಿತಿ ಅಧ್ಯಕ್ಷ ಬಿ. ಶ್ಯಾಮ ಭಟ್ಟರಿಂದ ಸ್ವಾಮೀಜಿಗೆ ಚಿನ್ನದ ಕಿರೀಟ ಧಾರಣೆ ಮಾಡಿದ್ದರು.