10 ಅಡಿ ಎತ್ತರದಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹಾಸನದಿಂದ ಜೀರೋ ಟ್ರಾಫಿಕ್ನಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಬೆಡ್ ಕೊಡದೇ ವೈದ್ಯರು ನಿರ್ಲಕ್ಷ್ಯವಹಿಸಿದ್ದಕ್ಕೆ 1 ವರ್ಷದ ಕಂದಮ್ಮ ಸಾವನ್ನಪ್ಪಿದೆ.
1 ವರ್ಷದ ಮಗು ತಾಯಿ ಕೈಯಿಂದ 10 ಅಡಿ ಮೇಲಿಂದ ಜಾರಿ ಕೆಳಗೆ ಬಿದ್ದಿತ್ತು. ತಲೆಗೆ ತೀವ್ರವಾದ ಗಾಯವಾಗಿ, ಅಸ್ವಸ್ಥವಾಗಿದ್ದ ಮಗುವನ್ನು ಪೋಷಕರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ಗೆ ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆ ಮಗುವನ್ನು ಜೀರೋ ಟ್ರಾಫಿಕ್ನಲ್ಲಿ ಕೊಂಡೊಯ್ದಿದ್ದು, ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸುವಂತೆ ನಿಮಾನ್ಸ್ ಆಡಳಿತ ಮಂಡಳಿಗೆ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ಜೀರೋ ಟ್ರಾಫಿಕ್ನಲ್ಲಿ ಮಗುವನ್ನು ಹಾಸನದಿಂದ ನಿಮಾನ್ಸ್ಗೆ ಕೇವಲ 1 ಗಂಟೆ 40 ನಿಮಿಷದಲ್ಲಿ ತಲುಪಿಸಲಾಗಿತ್ತು. ಆದರೆ ಬೆಡ್ ಖಾಲಿಯಿಲ್ಲ ಎಂದು ಆಡಳಿತ ಮಂಡಳಿ ಮಗುವನ್ನು ಆಸ್ಪತ್ರೆಯ ಆವರಣದಲ್ಲಿಯೇ ನಿಲ್ಲಿಸಿದೆ. ಮಗುವಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೆ ಬೇಜವಾಬ್ದಾರಿ ತೋರಿದ್ದಲ್ಲದೇ ಸುಮಾರು ಅರ್ಧ ಗಂಟೆಯಿಂದ ಮಗುವನ್ನು ಅಂಬುಲೆನ್ಸ್ನಲ್ಲಿಯೇ ಇರಿಸಲಾಗಿತ್ತು.
ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮಗುವಿನ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಮೃತಪಟ್ಟಿದೆ. ಮಗುವಿಗೆ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಆಕ್ರಂದನ ಮುಗಿಲುಮುಟ್ಟಿದೆ.ಅತ್ತ ಆಸ್ಪತ್ರೆಯಲ್ಲಿ ಬೆಡ್ ಕೊಡದೆ ವೈದ್ಯರು ನಿರ್ಲಕ್ಷ್ಯವಹಿಸಿದರೆ, ಇತ್ತ ಪೊಲೀಸರು ಹಾಗೂ ಅಂಬುಲೆನ್ಸ್ ಚಾಲಕರ ನಡುವೆ ವಾಗ್ವಾದ ನಡೆದಿದೆ. ನಿಮಾನ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಮೃತ ಮಗುವನ್ನು ವಿಧಾನಸೌಧದ ಮುಂದೆ ತಂದು ಪೋಷಕರು ಹಾಗೂ ಅಂಬುಲೆನ್ಸ್ ಚಾಲಕರು ಪ್ರತಿಭಟನೆಗೆ ಯೋಜಿಸಿದ್ದಾರೆ.