ಬ್ರಹ್ಮಾವರ: ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಛಾಯಾಗ್ರಾಹಕ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಕುಂದಾಪುರದ ಹಿರಿಯ ಛಾಯಾಗ್ರಾಹಕ ಹೇರೂರು ಅಶೋಕ್ ಶೆಟ್ಟಿ (56)ಎನ್ನಲಾಗಿದೆ. ಪುತ್ರ ಪನ್ನಗ (24) ಹಾಗೂ ಸ್ನೇಹಿತ ಕುಮಾರ್ ಜೊತೆ ಬೆಂಗಳೂರಿಗೆ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಕಾರಿನಲ್ಲಿ ತೆರಳಿ ಹಿಂದಿರುಗುತ್ತಿದ್ದ ವೇಳೆ ತುಮಕೂರಿನ ತಾವರೆಕೆರೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಅಶೋಕ್ ಶೆಟ್ಟಿ ಹಾಗೂ ಪುತ್ರ ಪನ್ನಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಪುತ್ರ ಪನ್ನಗನ ಸ್ಥಿತಿ ಇನ್ನೂ ಕೂಡ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಕುಮಾರ್ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಶೋಕ್ ಶೆಟ್ಟಿಯವರು ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕರ ಸಂಘಟನೆಯ ಮಾಜಿ ಅಧ್ಯಕ್ಷ, ಹಾಲೀ ಸಂಚಾಲಕರಾಗಿ, ಗ್ರಾ.ಪಂ. ಅಧ್ಯಕ್ಷರಾಗಿ, ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಹಾಗೂ ನಾವುಂದದಲ್ಲಿ ಮಾನಸ ಸ್ಟುಡಿಯೋ ಎನ್ನುವ ಯಶಸ್ವಿ ಸಂಸ್ಥೆಯನ್ನು ನಡೆಸುತ್ತಿದ್ದರು. ಶೆಟ್ಟರು ಸಾವಿರಾರು ಮಂದಿ ಸ್ನೇಹಿತರ ಬಳಗವನ್ನು ಅಗಲಿದ್ದಾರೆ.










