
ಪುಣೆ: ನಗದು ದೋಚಲು ಬಂದ ಕಳ್ಳ ಮಾಡಿದ ಎಡವಟ್ಟಿನಿಂದಾಗಿ ಎಟಿಎಂ ಮೆಷಿನ್ನಲ್ಲಿದ್ದ 3.98 ಲಕ್ಷ ರೂ. ನಗದು ಹೊತ್ತಿ ಉರಿದು ಭಸ್ಮವಾದ ಘಟನೆ ಪುಣೆಯ ಪಿಂಪರಿಯ ಚಿಂಚವಾಡದಲ್ಲಿ ನಡೆದಿದೆ.

ರವಿವಾರವಾದ್ದರಿಂದ ಜನರ ಓಡಾಟ ಕಡಿಮೆ ಇದ್ದ ಸಮಯವನ್ನು ಬಳಸಿಕೊಂಡ ಕಳ್ಳನೋರ್ವ ಎಚ್ಡಿಎಫ್ಸಿ ಬ್ಯಾಂಕಿನ ಎಟಿಎಂಗೆ ಕನ್ನ ಹಾಕಲು ಮುಂದಾಗಿದ್ದ. ಅಲ್ಲೇ ಇದ್ದ ಸಿಸಿ ಟಿವಿ ಕ್ಯಾಮರಾಗೆ ಕಪ್ಪು ಬಣ್ಣದ ಪೈಂಟ್ ಬಳಿದ ಗ್ಯಾಸ್ ಕಟರ್ನಿಂದ ಎಟಿಎಂ ಮೆಷಿನ್ನ ಬಾಗಿಲು ಒಡೆಯುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ದಿಢೀರ್ ಆಗಿ ಮೆಷಿನ್ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿ ಕಳ್ಳ ಹೆದರಿ ಓಟಕಿತ್ತಿದ್ದಾನೆ. ತತ್ಕ್ಷಣವೇ ಬ್ಯಾಂಕ್ ಅಧಿಕಾರಿಗಳಿಗೆ ಸ್ಥಳೀಯರಾರೋ ಮಾಹಿತಿ ನೀಡಿದ್ದು, ಅವರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಆದರೆ ಆ ವೇಳೆಗಾಗಲೇ ಎಲ್ಲಾ ಹಣ ಹೊತ್ತಿ ಉರಿದಿದೆ.

ಕಳ್ಳನ ವಿರುದ್ಧ ಐಪಿಸಿ ಸೆಕ್ಷನ್ ಸಾರ್ವಜನಿಕ ಸಂಪತ್ತನ್ನ ಹಾನಿಗೊಳಿಸಿರುವುದಕ್ಕಾಗಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
