
ಪುತ್ತೂರು: ಬಿಜೆಪಿ ಯುವ ಮೋರ್ಛಾ ರಾಜ್ಯ ಮಾಧ್ಯಮ ಸಂಚಾಲಕರಾಗಿ ಕೆಯ್ಯೂರು ನೂಜಿ ತರವಾಡು ಮನೆಯ ಅಕ್ಷಯ್ ರೈ ದಂಬೆಕ್ಕಾನರವರು ಆಯ್ಕೆಯಾಗಿದ್ದಾರೆ. ಯುವ ಮೋರ್ಛಾ ರಾಜ್ಯಾಧ್ಯಕ್ಷ ಡಾ.ಸಂದೀಪ್, ರಾಜ್ಯ ಯುವ ಮೋರ್ಛಾ ರಾಜ್ಯ ಪ್ರಭಾರಿಗಳಾದ ಮಹೇಶ್ ತೆಂಗಿನಕಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ರವರ ಸೂಚನೆಯಂತೆ ಈ ಆಯ್ಕೆ ಮಾಡಲಾಗಿದೆ.

ಅಕ್ಷಯ್ ರೈಯವರು ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರದ ಪ್ರಭಾರಿಗಳಾಗಿ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಯುವಮೋರ್ಛಾದ ಪ್ರಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಸವಿ ನೆನಪಲ್ಲಿ ನಡೆಯಲಿರುವ ಜನಸೇವಕ್ ಕಾರ್ಯಕ್ರಮದ ಸಂಚಾಲಕರಾಗಿಯೂ ಸೇವೆ ಮಾಡಲಿದ್ದಾರೆ. ಅಕ್ಷಯ್ ರೈಯವರ ಪಕ್ಷನಿಷ್ಠೆ ಮತ್ತು ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅವರನ್ನು ಮಾಧ್ಯಮ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ. ಇವರು ದಂಬೆಕ್ಕಾನ ಸದಾಶಿವ ರೈ ಮತ್ತು ಪ್ರಭಾ ಎಸ್.ರೈಯವರ ಪುತ್ರರಾಗಿದ್ದಾರೆ.



