

ಬೆಂಗಳೂರು: ಆರ್ಎಸ್ಎಸ್ನವರು ಚಡ್ಡಿ ಬಿಟ್ಟು ಇದೀಗ ಪ್ಯಾಂಟ್ ಹಾಕುತ್ತಿದ್ದಾರೆ. ಆರ್ಎಸ್ಎಸ್ನಲ್ಲಿ ಯಾರು ದೇಶ ಭಕ್ತರು ಇಲ್ಲ. ಆರ್ಎಸ್ಎಸ್ನಿಂದ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿ, ಆರ್ಎಸ್ಎಸ್ನವರು ದೇಶಕ್ಕಾಗಿ ಒಬ್ಬರು ಸತ್ತಿಲ್ಲ. ಸುಮ್ಮನೆ ಭಾರತ್ ಮಾತಾಕೀ ಜೈ ಅಂತ ಹೇಳುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಸಿಎಂ ದಿ. ಆರ್.ಗುಂಡೂರಾವ್ ಜನ್ಮದಿನಾಚರಣೆ ಅಂಗವಾಗಿ ಶ್ರೀರಾಂಪುರದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಬಡವರ ವಿರೋಧಿಗಳು. ಬಿಜೆಪಿ ತಮ್ಮ ಕಚೇರಿಯಲ್ಲಿ ಆಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಸಹ ಹಾಕುತ್ತಿರಲಿಲ್ಲ. ಈಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಹಾಕುತ್ತಾರೆ. ತಾಲಿಬಾನ್ಗಳೇ ಬಿಜೆಪಿ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಬಿಜೆಪಿ ದಾರಿದ್ರ್ಯದ ಸರ್ಕಾರ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಇದು ಮಾನ ಮರ್ಯಾದೆ ಇಲ್ಲದ ಸರ್ಕಾರ . ಈ ಸರ್ಕಾರ ವನ್ನು ಕಿತ್ತು ಹಾಕಿ ಎಂದು ಜನರಿಗೆ ಮನವಿ ಮಾಡಿದರು. ರಾಜಕಾರಣಿಗಳಿಗೆ ಹೃದಯ ವೈಶಾಲ್ಯತೆ ಇರಬೇಕು. ಹೃದಯ ವೈಶಾಲ್ಯತೆ ಇದ್ರೆ ಬಡವರ ಪರ ಚಿಂತಿಸುತ್ತಾರೆ. ಗುಂಡೂರಾವ್ ಬಡವರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯಾಗಿದ್ದರು. ನನ್ನ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಬಡವರು ಹಸಿವಿನಿಂದ ಮಲಗಬಾರದೆಂದು ಯೋಜನೆ ಜಾರಿ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು.












