
ಬ್ರಹ್ಮಾವರ: ಪತಿಯ ಕಿರುಕುಳದಿಂದ ಬೇಸತ್ತು ತನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರದ ಅಜ್ರಿ ಗ್ರಾಮದ ವಸಂತ ಕುಲಾಲ್ ಎಂಬವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಷಾ (31) ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಉಷಾ ಅವರಿಗೆ 11 ವರ್ಷಗಳ ಹಿಂದೆ ಚಂದ್ರಹಾಸ ಎಂಬಾತನೊಂದಿಗೆ ಮದುವೆ ಆಗಿದ್ದು, ಮದುವೆ ನಂತರ ಅವರು ಬೆಂಗಳೂರಿನಲ್ಲಿ ವಾಸವಿದ್ದರು ನಂತರ 8 ತಿಂಗಳಿನಿಂದ ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದಲ್ಲಿ ವಾಸಿಸುತ್ತಿದ್ದು, ಇಬ್ಬರೂ ಪೇತ್ರಿಯ ಗಾರ್ಮೆಂಟ್ಸ್ ಪ್ಯಾಕ್ಟರಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು.
ಆದರೆ ಬೆಂಗಳೂರಿನಲ್ಲಿ ಇರುವಾಗ ಆರೋಪಿಗೆ ವ್ಯವಹಾರದಲ್ಲಿ ಆದ ನಷ್ಟಕ್ಕೆ ಉಷಾರವರಿಗೆ ಬೈಯುವುದು ಹಾಗೂ ತವರು ಮನೆಯಲ್ಲಿ ನನಗೆ ಮರ್ಯಾದೆ ಸಿಕ್ಕುತ್ತಿಲ್ಲ ಎಂದು ಮನೆಯಲ್ಲಿ ಆಗಾಗ ಗಲಾಟೆ ಮಾಡುತ್ತಿದ್ದ ಬಗ್ಗೆ ‘ಉಷಾ ರವರು ತಮ್ಮ ಅಣ್ಣನಾದ ವಸಂತ ಕುಲಾಲ್ ಅವರ ಬಳಿ ಹೇಳಿಕೊಂಡಿದ್ದರು.
ಉಷಾ ಹಾಗೂ ಆರೋಪಿಯ ನಡುವೆ ಗಲಾಟೆಯಾಗಿದ್ದು, ಅನಂತರ ಉಷಾ ಬೇಸರಗೊಂಡು ರೂಂ ಒಳಗೆ ಹೋಗಿ ಲಾಕ್ ಮಾಡಿಕೊಂಡಿದ್ದರು. ಮರುದಿನ ಬೆಳಿಗ್ಗೆ ಉಷಾರವರನ್ನು ಕಿಟಕಿ ಮೂಲಕ ನೋಡಿದಾಗ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಅದರಂತೆ ಉಷಾರವರ ಸಾವಿಗೆ ಅವರ ಗಂಡನ ದುಷ್ಪ್ರರಣೆಯೇ ಕಾರಣ ಎಂಬುದಾಗಿ ವಸಂತ ಕುಲಾಲ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
