
ಮಂಗಳೂರು: ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಿ, ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಶ್ಯಾಮ್ ಶಂಕರ್, ಅಭಿಷೇಕ್, ಕಾರ್ತಿಕ್ ಹಾಗೂ ಸಾಗರ್ ಎನ್ನಲಾಗಿದೆ.


ಘಟನೆಯ ವಿವರ:
ನಗರದ ಮಣ್ಣಗುಡ್ಡೆಯ ಆರ್ಶೀವಾದ್ ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಬೋಜಪ್ಪನವರು ಕಲೆಕ್ಷನ್ ಆದ ಹಣ ಕಟ್ಟಲು ಬ್ಯಾಂಕಿಗೆ ಹೋಗುತ್ತಿದ್ದ ವೇಳೆ ಅದೇ ದಾರಿಯಲ್ಲಿ ಸಂಚು ಹಾಕಿ ಕಾಯುತ್ತಿದ್ದ ಅಪರಿಚಿತರು ಬೋಜಪ್ಪ ಅವರ ಮೇಲೆ ಬ್ಯಾಟಿನಿಂದ ಹಲ್ಲೆ ಮಾಡಿ, 4 ಲಕ್ಷದ 20 ಸಾವಿರ ನಗದನ್ನು ಕಸಿದುಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗಿದ್ದು, ಈ ಘಟನೆ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಆಯುಕ್ತರು ವಿಶೇಷ ತಂಡವನ್ನು ರಚಿಸಿ ಆರೋಪಿಗಳ ಜಾಡನ್ನು ಹಿಡಿದ ಪೊಲೀಸರು, ಬೋಜಪ್ಪನವರ ಪೆಟ್ರೋಲ್ ಪಂಪ್ ನಲ್ಲೇ ಕೆಲಸ ಮಾಡುತ್ತಿದ್ದ ಶ್ಯಾಮ್ ಶಂಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ.
ಈ ವೇಳೆ ಶ್ಯಾಮ್ ಶಂಕರ್ ನ ಮಾಹಿತಿಯಂತೆ ಇತರೆ ಆರೋಪಿಗಳಾದ ಅಭಿಷೇಕ್,ಕಾರ್ತಿಕ್ ಹಾಗೂ ಸಾಗರ್ ನನ್ನು ಬಂಧಿಸಿ, ಆರೋಪಿಗಳಿಂದ 60 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
