ಮಂಗಳೂರು : ರಾಷ್ಟ್ರೀಯ ಹೆದ್ದಾರಿ66ರ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿ ನಿರ್ಮಾಣಗೊಂಡ ಬೃಹತ್ ಗಾತ್ರದ ಹೊಂಡಕ್ಕೆ ಬಿದ್ದು ಸ್ಕೂಟರ್ ಸವಾರೆ ವಿದ್ಯಾರ್ಥಿನಿ ಬಲಗೈ ಮೂಳೆ ಮುರಿತಕ್ಕೊಳಗಾಗಿ, ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಗಾಯಾಳು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ಎಂ.ಎಸ್ಸಿ ವಿದ್ಯಾರ್ಥಿನಿ, ಕೊಟ್ಟಾರ ನಿವಾಸಿ ನಿಶ್ಮಿತಾ (19). ಘಟನೆಯಿಂದ ಮುಂದಿನ ತಿಂಗಳು ನಡೆಯಲಿರುವ ಯುಜಿಸಿ ಪರೀಕ್ಷೆ ಹಾಗೂ ಆಂತರಿಕ ಪರೀಕ್ಷೆ ಬರೆಯಲು ಸಾಧ್ಯವಿಲ್ಲ, ಶಿಕ್ಷಣದಿಂದ ಒಂದು ವರ್ಷವೇ ವಂಚಿತಳಾಗುವ ಆತಂಕಕ್ಕೆ ಒಳಗಾಗಿದ್ದಾರೆ.
ಜು.22 ರಂದು ಸಂಜೆ ಕೊಣಾಜೆ ಕಡೆಯಿಂದ ಮಂಗಳೂರಿಗೆ ತನ್ನ ದ್ವೀಚಕ್ರ ವಾಹನದಲ್ಲಿ ತೆರಳುವ ಸಂದರ್ಭ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿ ಬೃಹತ್ ಗಾತ್ರದ ಹೊಂಡಕ್ಕೆ ಸ್ಕೂಟಿ ಸಿಲುಕಿ ರಸ್ತೆಗೆ ಉರುಳಿದೆ. ಜೋರಾಗಿ ಮಳೆಯಿದ್ದ ಕಾರಣ ಹೊಂಡದ ಅರಿವು ಅವರಿಗೆ ಬಂದಿರಲಿಲ್ಲ. ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಿಕ್ಷಾ ಚಾಲಕರೊಬ್ಬರು ತಕ್ಷಣ ನಗರದ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು. ಬಲಗೈ ಮೂಳೆ ಮುರಿತಕ್ಕೊಳಗಾಗಿದ್ದು ಅಲ್ಲದೆ ಕೈ ಹಾಗೂ ಮೈ ಪೂರ್ತಿ ಅಲ್ಲಲ್ಲಿ ಗಾಯಗಳಾಗಿವೆ. ಬಲಗೈ ಮೂಳೆ ಜೋಡಿಸಲು ಶಸ್ರ್ತಚಿಕಿತ್ಸೆ ನಡೆಸಿ ರಾಡನ್ನು ಅಳವಡಿಸಲಾಗಿದೆ. ಮುಂದಿನ ಆರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
“ಎಂ.ಎಸ್ಸಿ ಅಂತಿಮ ವರ್ಷವಾಗಿರುವುದರಿಂದ ಆಗಸ್ತ್ ತಿಂಗಳಿನಲ್ಲಿ ಆಂತರಿಕ ಪರೀಕ್ಷೆಗಳಿವೆ. ಅದನ್ನು ಎದುರಿಸಲು ಸಾಧ್ಯವಿಲ್ಲ. ಜೊತೆಗೆ ಆ.12 ರಂದು ಯುಜಿಸಿ ಪರೀಕ್ಷೆಯೂ ಇರುವುದರಿಂದ ಭವಿಷ್ಯವೇ ಅತಂತ್ರವಾಗಿದೆ. ಶಸ್ತ್ರಚಿಕಿತ್ಸೆಗೆ ಈವರೆಗೆ ರೂ.65,000 ಖರ್ಚನ್ನು ಹೆತ್ತವರು ಭರಿಸಿದ್ದಾರೆ. ಆಸ್ಪತ್ರೆ ಬಿಲ್ ಇನ್ನು ಬರಬೇಕಿದೆ. ಹೆದ್ದಾರಿ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ. ಪ್ರಕರಣ ಯಾರ ಮೇಲೆ ದಾಖಲಿಸುವುದೇ ಗೊಂದಲದಲ್ಲಿರುವುದರಿಂದ ಅದನ್ನು ಕೈಬಿಟ್ಟಿದ್ದೇವೆ” ಎಂದು ಗಾಯಾಳು ವಿದ್ಯಾರ್ಥಿನಿ ನಿಶ್ಮಿತಾ ತಿಳಿಸಿದ್ದಾರೆ.