ಜಿಲ್ಲಾ ಕಾರಾಗೃಹಕ್ಕೆ ಆರೋಪಿಯೋರ್ವನನ್ನು ಬಸ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಪೋಲೀಸರನ್ನು ದೂಡಿ ಹಾಕಿ ಬಸ್ ನಿಂದ ಹಾರಿ ಪರಾರಿಯಾಗಲು ಯತ್ನಿಸಿದ ಘಟನೆ ಬುಧವಾರ ಸಂಜೆ ವೇಳೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮರಕೋಟ್ಲು ಎಂಬಲ್ಲಿ ನಡೆದಿದೆ.
2003 ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕಳ್ಳಿಗೆ ನಿವಾಸಿ ಗಿರೀಶ್ ಯಾನೆ ಗಿರಿಧರ್ ಆರೋಪಿಯಾಗಿದ್ದು , ಪೋಲೀಸರ ಕರ್ತವ್ಯ ಕ್ಕೆ ಅಡ್ಡಿ ಪಡಿಸಿ ತಲೆಮರೆಸಿಕೊಳ್ಳಲು ಯತ್ನಿಸಿದ ಕಾರಣಕ್ಕಾಗಿ ಈತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಘಟನೆಯ ಹಿನ್ನೆಲೆ ಏನು?:2003 ರಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯದ ಅದೇಶದಂತೆ ಪೋಲೀಸರು ಈತನನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವ ಸಲುವಾಗಿ ಶಿಕ್ಷಾ ಕೈದಿಯನ್ನು ಸರ್ಕಾರಿ ಬಸ್ ನಲ್ಲಿ ಇಬ್ಬರು ಪೋಲೀಸರು ಬಿಸಿರೋಡಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು.

ವೇಳೆ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಬಸ್ ನಿಧಾನವಾಗುತ್ತಿದ್ದಂತೆ , ನಿರ್ವಾಹಕನಿಗೆ ವಾರೆಂಟ್ ನ್ನು ನೀಡುತ್ತಿರುವ ಸಮಯವನ್ನು ಉಪಯೋಗಿಸಿ ದ ಆರೋಪಿ ಪೋಲೀಸರ ನ್ನು ಬಸ್ ನೊಳಗೆ ದೂಡಿ ಹಾಕಿ ಬಸ್ ನಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ.
ಕೂಡಲೇ ಮಿಂಚಿನ ವೇಗದಲ್ಲಿ ಪೋಲೀಸರು ಆರೋಪಿಯನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಈತನನ್ನು ಬಂಧಿಸಿದ್ದಾರೆ. ಆರೋಪಿ ಬೆಂಗಾವಲು ಕರ್ತವ್ಯ ಕ್ಕೆ ಅಡ್ಡಿಪಡಿಸಿ ಪರಾರಿಯಾಗಲು ಯತ್ನಿಸಿದಕ್ಕಾಗಿ ಈತನ ಮೇಲೆ ಪ್ರಕರಣ ದಾಖಲಾಗಿದೆ.
