ವಿಟ್ಲ: ಕರಾವಳಿಯಲ್ಲಿ ಇತ್ತೀಚಿಗಿನ ದಿನಗಳಲ್ಲಿ ಅಕ್ರಮ ಚಟುವಟಿಕೆ, ಕೊಲೆ, ಸುಲಿಗೆ, ಕಳ್ಳತನ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಲು ಹರ ಸಾಹಸ ಪಡುತ್ತಿದೆ. ಇದಕ್ಕೆ ಜನಪ್ರತಿನಿಧಿಗಳೂ ಕೂಡ ಸಾಥ್ ಕೊಡುತ್ತಾರೆ. ಆದ್ರೆ ವಿಟ್ಲ ಪೇಟೆಯ ಸ್ಥಿತಿಯನ್ನೊಮ್ಮೆ ಗಮನಿಸುವಾಗ ನಿಜಕ್ಕೂ ಆತಂಕ ವ್ಯಕ್ತವಾಗುತ್ತಿದೆ. ಕೇರಳಕ್ಕೆ ಹೊಂದಿಕೊಂಡಿರುವ ವಿಟ್ಲ ಈಗ ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸುತ್ತಿದ್ದಾರೆ.
ಕೆಂಡದಂತಾದ ಕರಾವಳಿ..! – ಪೊಲೀಸ್ ಇಲಾಖೆ ಕಟ್ಟೆಚ್ಚರ
ಕರಾವಳಿಯಲ್ಲಿ ಹರಿದ ನೆತ್ತರಿನ ಬಗ್ಗೆ ವಿವರಿಸಬೇಕಾದ ಅವಶ್ಯಕತೆ ಜಾಸ್ತಿಯಿಲ್ಲ. ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆದ್ರೆ ಇಂತಹ ಸಂಕಟದ ಸಮಯದಲ್ಲಿ ಕೇರಳದಿಂದ ನೇರವಾಗಿ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ವಿಟ್ಲ ಪೇಟೆ ನಾಲ್ಕು ಮಾರ್ಗ ಕತ್ತಲೆಯಾಗಿದೆ..!
ಕಗ್ಗತ್ತಲಲ್ಲಿ ವಿಟ್ಲ ನಾಲ್ಕು ಮಾರ್ಗ..!
ಸಾಲೆತ್ತೂರು, ಬದಿಯಡ್ಕ, ಪುತ್ತೂರು, ಮಂಗಳೂರಿನಿಂದ ವಿಟ್ಲಕ್ಕೆ ರಸ್ತೆ ಸಂಪರ್ಕವಿದೆ. ಇಲ್ಲಿ ಹಗಲು ರಾತ್ರಿ ವಾಹನ ಸಂಚಾರ ಮಾಡುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಕೆಲ ವರ್ಷಗಳ ಹಿಂದೆ ವಿಟ್ಲ ನಾಲ್ಕು ಮಾರ್ಗದ ಪಕ್ಕದಲ್ಲೇ ಹೈಮಾಸ್ಟ್ ವಿದ್ಯುತ್ ದಾರಿ ದೀಪವನ್ನು ಸರ್ಕಾರ ಅಳವಡಿಸಿತ್ತು. ಇದರಿಂದ ಜನರು ನಿಟ್ಟುಸಿರು ಬಿಟ್ಟು ರಾತ್ರಿ ಸಂಚಾರ ಮಾಡುತ್ತಿದ್ದರು. ವಿಟ್ಲ ಠಾಣಾ ಪೊಲೀಸರು ನಗರದಲ್ಲಿ ಆಗುವ ವಿದ್ಯಾಮಾನಗಳ ಬಗ್ಗೆ ನಿಗಾ ಇರಿಸಲು ಸಿಸಿ ಕ್ಯಾಮಾರ ಕೂಡ ಅಳವಡಿಸಿದ್ದು ರಾತ್ರಿಯಲ್ಲಿ ನಡೆಯುವ ಚಟುವಟಿಕೆಗೆ ಈ ವಿದ್ಯುತ್ ದಾರಿ ದೀಪ ನೆರವಾಗುತ್ತಿತ್ತು. ಆದ್ರೆ ಈಗ ಹೈಮಾಸ್ಟ್ ವಿದ್ಯುತ್ ದಾರಿ ದೀಪ ಕೆಟ್ಟಿದ್ದು ಅಕ್ರಮ ಚಟುವಟಿಕೆಗೆ ಕಡಿವಾಣ ಇಲ್ಲದಂತಾಗಿದೆ.
ವಿದ್ಯುತ್ ದಾರಿ ದೀಪ ಕೆಟ್ಟಿದ್ದರೂ ಕೇಳೋರಿಲ್ಲ..!
ನಾಲ್ಕು ಮಾರ್ಗದಲ್ಲಿ ವಿದ್ಯುತ್ ದಾರಿ ದೀಪ ಕೆಟ್ಟು ತಿಂಗಳುಗಳೇ ಕಳೆದಿದೆ. ಈ ವಿಷಯ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಬಂದಿದ್ದರೂ ಜಾಣ ಮೌನ ವಹಿಸಿದಂತಿದೆ. ವಿಟ್ಲದಲ್ಲಿ ಅಕ್ರಮ ಬಾಕ್ಸೈಟ್ ದಂಧೆ, ಅಕ್ರಮ ಗೋಸಾಟ, ಹೀಗೆ ಅನೇಕ ಅಹಿತಕರ ಘಟನೆಗಳು ಪದೇ ಪದೇ ನಡೆಯುತ್ತಿದೆ. ಮೊನ್ನೆಯಷ್ಟೇ ಪ್ರವೀಣ್ ನೆಟ್ಟಾರು ಹತ್ಯೆ ಕರಾವಳಿಯನ್ನೇ ನಿದ್ದೆಗಡೆಸಿತ್ತು. ಇದರಲ್ಲಿ ಶಾಮೀಲಾದ ಹಂತಕರು ಕೇರಳ ಮೂಲದವರು ಎಂಬ ಮಾಹಿತಿ ಇದೆ. ವಿಟ್ಲ ಪೊಲೀಸ್ ಠಾಣೆ ಕೇರಳಕ್ಕೆ ಹೊಂದಿಕೊಂಡಿದೆ. ಹೀಗಾಗಿ ಪೊಲೀಸರು ರಾತ್ರಿ ಹಗಲೆನ್ನದೆ ನಿಗಾ ವಹಿಸಬೇಕಾಗಿದೆ. ಆದ್ರೆ ರಾತ್ರಿ ವೇಳೆಯಲ್ಲೇ ನಾಲ್ಕು ಮಾರ್ಗ ಕತ್ತಲಲ್ಲಿರುವುದು ನಿಜಕ್ಕೂ ಖೇದಕರ ಎಂಬುವುದು ಸಾರ್ವಜನಿಕರ ಆತಂಕ.
ಎಚ್ಚೆತ್ತುಕ್ಕೊಳ್ಳಬೇಕಾದ ಅನಿವಾರ್ಯತೆ ಸಾಕಷ್ಟಿದೆ.
ವಿಟ್ಲದ ನಾಲ್ಕು ಮಾರ್ಗದಲ್ಲಿ ಅಳವಡಿಸಲಾದ ಹೈಮಾಸ್ಟ್ ವಿದ್ಯುತ್ ದಾರಿ ದೀಪ ಹಾಳಾಗಿ ತಿಂಗಳುಗಳೇ ಕಳೆದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.