
ಬೆಂಗಳೂರು: ಬುಧವಾರದಿಂದ ಪಿಯು, ಡಿಗ್ರಿ ಕಾಲೇಜು ಆರಂಭಿಸಲಾಗುತ್ತೆ. ಹೈಕೋರ್ಟ್ ಆದೇಶ ಪಾಲಿಸಿ ಕಾಲೇಜು ಆರಂಭಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಭೆ ಬಳಿಕ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ. ನಮ್ಮ ಪೋಷಕರು ಶಿಕ್ಷಣ ಮುಂದುವರಿಸುವ ಉದ್ದೇಶದಲ್ಲಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸುವಂತಿಲ್ಲ, ಆದೇಶ ಪಾಲಿಸಬೇಕು. ಘಟನೆ ಸಂಬಂಧ ಮಾಹಿತಿ ಕಲೆಹಾಕಲಾಗುತ್ತಿದೆ. ನಾವು ಹೇಳುವುದಿಷ್ಟೇ, ಹೈಕೋರ್ಟ್ ಆದೇಶ ಪಾಲಿಸಬೇಕು. ಆದೇಶದಲ್ಲಿರುವುದನ್ನ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪಿಯು ಹಾಗೂ ಡಿಗ್ರಿ ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಮೂರು ದಿನಗಳ ರಜೆಯ ಬಳಿಕ ಸೋಮವಾರದಿಂದ ಹೈಸ್ಕೂಲ್ ತರಗತಿಗಳನ್ನು ಪುನಾರಂಭ ಮಾಡಲಾಗಿತ್ತು. ಮುಂದುವರಿದು ನಂತರದ ತರಗತಿಗಳನ್ನು ಕೂಡ ಆರಂಭಿಸಲು ಸರ್ಕಾರ ಮುಂದಾಗಿದೆ.

ಹಿಜಾಬ್ ವಿವಾದ ಸಂಬಂಧಿಸಿದಂತೆ ಕರ್ನಾಟಕದ ಜಿಲ್ಲಾಡಳಿತಗಳು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಈ ಕುರಿತು ಸಿಎಂ ಬೊಮ್ಮಾಯಿ ಈಗಾಗಲೇ ಸಭೆಗಳನ್ನು ನಡೆಸಿದ್ದಾರೆ. ಪ್ರಕರಣವು ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಸದ್ಯ, ತೀರ್ಪು ನೀಡುವವರೆಗೆ ಯಾವುದೇ ಧಾರ್ಮಿಕ ಗುರುತಿನ ವಸ್ತ್ರ ಧರಿಸದಂತೆ ಕರ್ನಾಟಕ ಹೈಕೋರ್ಟ್ ಹೇಳಿದೆ.










