
ಮಂಗಳೂರು:ಕಾಸರಗೋಡು ಹೊಸಂಗಡಿಯ ರಾಜಧಾನಿ ಜುವೆಲ್ಲರಿಯಲ್ಲಿ ದರೋಡೆ ಮಾಡಿ ಬರುತ್ತಿದ್ದ ವೇಳೆ ಆರೋಪಿಗಳ ಕಾರನ್ನು ಅಡ್ಡಗಟ್ಟಿ ಉಳ್ಳಾಲ ಪೊಲೀಸರು 14,35,500 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಉಳ್ಳಾಲ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಟಿ.ಆರ್ ಹಾಗೂ ಸಿಬ್ಬಂದಿಗಳು ಕೆ.ಸಿ.ರೋಡ್ ಜಂಕ್ಷನ್ ಬಳಿಯಲ್ಲಿ ಮಂಜೇಶ್ವರದಿ0ದ ಬರುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಲು ಯತ್ನಿಸಿದ್ದಾರೆ, ಈವೇಳೆ ಕಾರಿನಲ್ಲಿದ್ದವರು ಮಾರಕಾಯುಧದಿಂದ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫರಂಗಿಪೇಟೆಯ ಮೊಹಮ್ಮದ್ ಗೌಸ್, ಸುರತ್ಕಲ್ನ ಇಮ್ರಾನ್ ಹಾಗೂ ಇನ್ನಿತರರು ಕಾರಿನಲ್ಲಿದ್ದರು, ಆರೋಪಿಗಳು ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ವಾಚ್ಮೆನ್ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

ಆಮೇಲೆ ಕಾರನ್ನು ತಪಾಸಣೆ ನಡೆಸಿದಾಗ, 7.75 ಕೆಜಿ ಬೆಳ್ಳಿ, 1,90,000 ಲಕ್ಷ ನಗದು, 30 ಹರಳುಗಳು, ವಿವಿಧ ಕಂಪನಿಯ ವಾಚ್ಗಳು, ಡಿವಿಆರ್, ಕಬ್ಬಿಣದ ಕತ್ತರಿ, ಮೆಣಸಿನ ಹುಡಿ ಪ್ಯಾಕೆಟ್, ಸ್ಪ್ರೇ ಪೈಂಟ್ ಡಬ್ಬಿ, ಎಲೆಕ್ಟ್ರಾನಿಕ ಮಾಪಕ, ಸೈರನ್ ಮೆಶಿನ್, ಗ್ಯಾಸ್ ಸಿಲಿಂಡರ್, ಕಬ್ಬಿಣದ ಕಟ್ಟರ್, ಕಬ್ಬಿಣದ ರಾಡ್ಗಳು, ಮಚ್ಚು ಹಾಗೂ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

