ವಿಟ್ಲ: ಬೇಕರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಅ.29 ರಂದು ನಡೆದಿದ್ದು ಇದೀಗ ಮಹಿಳೆ ಮುಡಿಪುವಿನಲ್ಲಿ ಪತ್ತೆಯಾಗಿದ್ದಾರೆ.
ಕಡಂಬು ನಿವಾಸಿ ನಾಗೇಶ್ ಎಂಬವರ ಪತ್ನಿ ಕವಿತಾ(29) ಕಾಣೆಯಾದವರು.

ಕವಿತಾ ರವರು ವಿಟ್ಲ ಮಂಗಳೂರು ರಸ್ತೆಯಲ್ಲಿರುವ ಎನ್.ಆರ್. ಭಟ್ ಸ್ವೀಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅ.29 ರಂದು ಬೆಳಿಗ್ಗೆ ಎಂದಿಂನಂತೆ ಕೆಲಸಕ್ಕೆಂದು ತೆರಳಿದಾಕೆ ಸಂಜೆ ಸಹ ಕೆಲಸಗಾರರಲ್ಲಿ ತಾನು ತಾಯಿ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು, 6 ಗಂಟೆಯಾದರೂ ಆಕೆ ತಾಯಿ ಮನೆಗೆ ಬಂದಿಲ್ಲವೆಂದು ಆಕೆಯ ಸಹೋದರ ಗಿರೀಶ್ ಆಕೆಯ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆದರೆ ಆಕೆಯ ಫೋನ್ ಸ್ವಿಚ್ ಆಪ್ ಆಗಿರುವುದನ್ನು ಆಕೆಯ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ.

ಆಕೆಯ ಮನೆಯವರು ಮನೆಗೆ ಬರುವ ಪರಿಸರದಲ್ಲಿ ಹುಡುಕಾಡಿದರೂ ಕವಿತಾ ಪತ್ತೆಯಾಗಿರುವುದಿಲ್ಲ. ಈ ವಿಚಾರವನ್ನು ಆಕೆಯ ಪತಿ ನೆರೆ ಹೊರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ತಿಳಿಸಿ ವಿಚಾರಿಸಿದಾಗ ಪತ್ನಿಯ ಬಗ್ಗೆ ತಿಳಿದು ಬಂದಿಲ್ಲ.

ಈ ಕುರಿತು ನಾಗೇಶ್ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ್ದ ವಿಟ್ಲ ಪೊಲೀಸರು ವ್ಯಾಪಕ ಶೋಧಕಾರ್ಯ ನಡೆಸಿ ಮಹಿಳೆಯನ್ನು 24 ಗಂಟೆಯೊಳಗೆ ಮುಡಿಪುವಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
