

ಚನ್ನಪಟ್ಟಣ: ಸಾವಿರಾರು ಮನೆಗಳಿಗೆ ನೀರು ಪೂರೈಸುವ ಟ್ಯಾಂಕ್ನಲ್ಲಿ ಶನಿವಾರ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಚನ್ನಪಟ್ಟಣದ ನ್ಯಾಯಾಲಯ ಹಿಂಭಾಗದ ಮಾರುತಿ ಬಡಾವಣೆಯ ಓವರ್ಹೆಡ್ ಟ್ಯಾಂಕ್ ನಲ್ಲಿ ಸಂಭವಿಸಿದೆ.


ಸುಮಾರು ಮೂರು ವಾರ್ಡ್ಗಳ ಸಾವಿರಾರು ಮನೆಗಳಿಗೆ ನೀರು ಪೂರೈಸುವ ಸುಮಾರು 1 ಲಕ್ಷ ಲೀಟರ್ಗೂ ಅಧಿಕ ಸಾಮರ್ಥ್ಯದ ಟ್ಯಾಂಕ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು,
ಮೃತದೇಹದ ಅಂಗಾಂಗಗಳು ಟ್ಯಾಂಕ್ನ ದೊಡ್ಡ ಪೈಪ್ಗಳಲ್ಲಿ ದೊರೆತಿರುವ ಕಾರಣ ಈ ಮಹಿಳೆ ಹಲವು ದಿನಗಳ ಹಿಂದೆಯೇ ಟ್ಯಾಂಕ್ಗೆ ಬಿದ್ದು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ವಾಸನೆಯುಕ್ತ ನೀರು ಸರಬರಾಜಾಗುತ್ತಿತ್ತು ಎನ್ನಲಾಗಿದೆ.

ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕ್ನಿಂದ ಶುಕ್ರವಾರ ಸಂಜೆಯೇ ನೀರು ಪೂರೈಕೆ ನಿಂತು ಹೋಗಿದೆ. ಇದನ್ನು ಗಮನಿಸಿದ ಹಲವರು ಜಲಮಂಡಳಿ, ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.


ಶನಿವಾರ ಓವರ್ ಹೆಡ್ ಟ್ಯಾಂಕ್ ಬಳಿಗೆ ಬಂದ ಜಲಮಂಡಳಿ ಹಾಗೂ ನಗರಸಭೆ ಸಿಬ್ಬಂದಿ ಟ್ಯಾಂಕ್ ಕೆಳಗೆ ಇದ್ದ ದೊಡ್ಡ ವಾಲ್ಟ್ ಅನ್ನು ಬಿಚ್ಚಿದ್ದಾರೆ. ಆಗ ಮೃತದೇಹದ ಕಾಲು ಪೈಪ್ಗೆ ಅಡ್ಡವಾಗಿ ಸಿಕ್ಕಿಕೊಂಡಿರುವುದು ಗೋಚರವಾಗಿದೆ. ಮೃತದೇಹದ ಕಾಲು ಸಿಕ್ಕಿದ ನಂತರ ಟ್ಯಾಂಕ್ ಮೇಲೇರಿ ಪರಿಶೀಲನೆ ನಡೆಸಲಾಯಿತು. ಆದರೆ ಮೃತದೇಹದ ಯಾವುದೇ ಅಂಗ ಪತ್ತೆಯಾಗಿಲ್ಲ. ನೀರಿನಲ್ಲಿ ಮೃತದೇಹ ಬೆರೆತು ಹೋಗಿರಬಹುದು ಎನ್ನಲಾಗಿದೆ.
ಮೃತದೇಹದ ಕಾಲು ಪತ್ತೆಯಾದ ನಂತರ ನೀರು ಸರಬರಾಜು ಮಂಡಳಿ ಹಾಗೂ ನಗರಸಭೆ ಸಿಬ್ಬಂದಿ ಅದನ್ನು ಹೊರ ತೆಗೆಯಲು ಸತತ ಮೂರು ಗಂಟೆ ಕಾಲ ಕಾರ್ಯಾಚರಣೆ ನಡೆಸಿದರು. ಆದರೆ ಮೃತದೇಹದ ತೊಡೆಸಹಿತ ಕಾಲು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. ಉಳಿದ ಭಾಗ ಸಿಕ್ಕಿಲ್ಲ. ಜೆಸಿಬಿ ಬಳಸಿ ಪೈಪ್ಲೈನ್ ಅಗೆದರೂ ಮೃತದೇಹ ಪತ್ತೆಯಾಗಿಲ್ಲ. ದೇಹದ ಇತರ ಭಾಗಗಳು ಎಲ್ಲಿ ಹೋದವು ಎನ್ನುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.










