
ಸುಳ್ಯ: ಸಂಪಾಜೆಯಲ್ಲಿನ ಮದರಸ ಮತ್ತು ದಫನ ಭೂಮಿಯನ್ನು 1 ತಿಂಗಳ ಒಳಗೆ ತೆರವುಗೊಳಿಸಬೇಕೆಂದು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ.
ಗೂನಡ್ಕ ಎಂಬಲ್ಲಿ ಮೀಸಲು ಅರಣ್ಯದ ಜಾಗದಲ್ಲಿ ಅಕ್ರಮವಾಗಿ ಮದರಸಾ ಮತ್ತು ಧಪನ ಭೂಮಿ ನಿರ್ಮಿಸಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಆರೋಪಿಸಿದೆ. ಸಂಪಾಜೆ ಗ್ರಾಮದ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಎನ್ನುವ ಸಮಿತಿಯು ಮೀಸಲು ಅರಣ್ಯ ಪ್ರದೇಶದ ಸರ್ವೇ ನಂಬರ್ 89/1 ಮತ್ತು 89/2ರ 20 ಸೆಂಟ್ಸ್ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಲ್ಲಿ ಅಕ್ರಮವಾದ ಮಸೀದಿ ಮತ್ತು ಮದರಸವನ್ನು ನಿರ್ಮಿಸಿ ಅಕ್ರಮವಾಗಿ ದಫನ ಮಾಡುವುದು ಕಂಡು ಬಂದಿದೆ ಎಂದು ಹಿಂದೂ ಜಾಗರಣಾ ವೇದಿಕೆ ಆರೋಪಿಸಿದೆ.


ಈ ಬಗ್ಗೆ ಸ್ಥಳೀಯವಾಗಿ ಅರಣ್ಯ ಇಲಾಖೆಗೆ ದೂರು ನೀಡಿದ ಸಂದರ್ಭದಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಒತ್ತುವರಿದಾರರು ತೆರವು ಮಾಡದೇ ಇದ್ದಲ್ಲಿ ಇಲಾಖಾ ವತಿಯಿಂದ ಒತ್ತುವರಿ ಪ್ರದೇಶದಲ್ಲಿ ಒತ್ತುವರಿ ನಿರ್ಮಿಸಿದ ಕಟ್ಟಡ ರಚನೆಗಳು, ಮತ್ತು ಯಾವುದೇ ಬೆಲೆ ಇದ್ದಲ್ಲಿ ನಿಯಮಾನುಸಾರ ಕಿತ್ತುಹಾಕಿ ತೆರವುಗೊಳಿಸಿ ಭೂಮಿಯನ್ನು ಇಲಾಖಾ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಭೂಮಿಯನ್ನು ಅದರ ಮೂಲಸ್ಥಿತಿಗೆ ತರಲು ತಗಲುವ ವೆಚ್ಚವನ್ನು ಒತ್ತುವರಿದಾರರು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 109ರ ಪ್ರಕಾರ ವಸೂಲಿ ಮಾಡಬೇಕೆನ್ನುವ ಆದೇಶವನ್ನು ಎಸಿಎಫ್ ಕೋರ್ಟ್ ಮಾಡಿದೆ.
ಎಸಿಎಫ್ ಕೋರ್ಟ್ನ ಆದೇಶವನ್ನು ಸಿಸಿಎಫ್ ಕೋರ್ಟ್ ಕೂಡ ಎತ್ತಿಹಿಡಿದು ಅದೇ ಆದೇಶವನ್ನು ಜಾರಿಗೊಳಿಸಿದೆ. ಆದ್ದರಿಂದ ಈ ಕೋರ್ಟ್ನ ಆದೇಶವನ್ನು ಪಾಲನೆ ಮಾಡಬೇಕು. ಗೂನಡ್ಕದಲ್ಲಿ ರಕ್ಷಿತಾರಣ್ಯದ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಜಾಗವನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಬೇಕು, ಆ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.


