ಮಂಗಳೂರು: ತುಳುವನ್ನು ರಾಜ್ಯದ 2ನೇ ಭಾಷೆಯನ್ನಾಗಿ ಘೋಷಣೆ ಮಾಡಲು ಅಧ್ಯಯನ ಸಮಿತಿಯ ಅಗತ್ಯ ಏನು? ನೇರವಾಗಿ ಘೋಷಣೆ ಮಾಡಲು ಏನು ಸಮಸ್ಯೆ? ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಗೆ ಅದರದ್ದೇ ಆದ ಇತಿಹಾಸ ಇದೆ. ಈ ಭಾಷೆಯ ಬಗ್ಗೆ ಅಧ್ಯಯನ ಮಾರಿ ವರದಿ ಕೊಡುವ ಅವಶ್ಯಕತೆ ಏನು? ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ತುಳು ಭಾಷೆಗೆ ಈ ಮಾನ್ಯತೆ ನೀಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಚುನಾವಣೆ ಹತ್ತಿರ ಬರುತ್ತಿರುವಾಗ ಅಧ್ಯಯನ ಸಮಿತಿ ಮಾಡ್ತಿದ್ದಾರೆ. ಅಂದರೆ ಅವರಿಗೆ ಇದರ ಉದ್ದೇಶವೇ ಇಲ್ಲ. ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಅಷ್ಟೇ. ಸರ್ಕಾರ ಅಧ್ಯಯನ ಸಮಿತಿ ಮಾಡಿರೋದೇ ತುಳು ಭಾಷೆಗೆ ಮಾಡಿರುವ ಅವಮಾನ. ಕನ್ನಡ ಮತ್ತು ಸಂಸ್ಕೃತಿ ಸಚಿವರು ತುಳುನಾಡಿನವರೇ ಆಗಿರುವಾಗ ಇದುವರೆಗೆ ಯಾಕೆ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ? ಎಂದು ಅವರು ಪ್ರಶ್ನಿಸಿದರು.
ತುಳುವಿಗಾಗಿಯೇ ಅಕಾಡೆಮಿ ಇದೆ. ಸಾಕಷ್ಟು ಸಾಹಿತ್ಯ ರಚನೆಯಾಗಿದೆ, ಸಾಹಿತಿಗಳಿದ್ದಾರೆ, ತುಳು ಯಕ್ಷಗಾನಗಳಿವೆ. ಇಷ್ಟೆಲ್ಲ ಸುದೀರ್ಘವಾದ ಇತಿಹಾಸ ಇರುವಾಗ ಅಧ್ಯಯನ ಸಮಿತಿ ರಚಿಸುವ ಅಗತ್ಯವೇನು? ನೇರವಾಗಿ ಘೋಷಣೆ ಮಾಡಲು ಏನು ಸಮಸ್ಯೆ? ಬಿಜೆಪಿ ಸರ್ಕಾರ ಈ ತೀರ್ಮಾನ ಮಾಡದಿದ್ದರೆ ಕಾಂಗ್ರೆಸ್ ಸರ್ಕಾರ ಬಂದಾಗ ಈ ತೀರ್ಮಾನ ಕೈಗೊಳ್ಳಲು ಬದ್ಧ ಎಂದು ಖಾದರ್ ಹೇಳಿದರು.