ಲಕ್ನೋ: ಆತ್ಮಾಹುತಿ ದಾಳಿ ಮೂಲಕ ಭಾರಿ ಸ್ಫೋಟಕ್ಕೆ ಯತ್ನಿಸಿದ್ದ, ಅಲ್ ಖೈದಾ ಉಗ್ರ ಸಂಘಟನೆಯ ಸಂಚನ್ನು ವಿಫಲಗೊಳಿಸುವಲ್ಲಿ ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ(ಎಟಿಎಸ್) ಯಶಸ್ವಿಯಾಗಿದೆ.
ಲಖನೌದ ಜನನಿಬಿಡ ಪ್ರದೇಶಗಳಲ್ಲಿ ಆತ್ಮಾಹುತಿ ದಾಳಿಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಕಾರ್ಯ ಪ್ರವೃತ್ತರಾದ ಎಟಿಎಸ್ ಸಿಬ್ಬಂದಿ ದಾಳಿ ನಡೆಸಿ, ಮಿನಾಜ್ ಅಹ್ಮದ್ ಹಾಗೂ ನಾಸಿರುದ್ದೀನ್ ಎಂಬುವವರನ್ನು ಬಂಧಿಸಿದ್ದಾರೆ. ಜತೆಗೆ ಸಜೀವ ಬಾಂಬ್ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ.
ನಿನ್ನೆ 11 ಸರ್ಕಾರಿ ಅಧಿಕಾರಿಗಳನ್ನುಅಲ್ಖೈದಾ ಉಗ್ರರ ಜತೆಗಿನ ನಂಟಿನ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಸರ್ಕಾರ ವಜಾಗೊಳಿಸಿತ್ತು. ಲಖನೌದ ನಿವಾಸಿಗಳಾದ ಈ ಉಗ್ರರು ಅಲ್ ಖೈದಾ ಅನ್ಸಾರ್ ಖಜ್ವಾತ್ ಉಲ್ ಹಿಂದ್ ಸಂಘಟನೆಯ ಆತ್ಮಾಹುತಿ ದಾಳಿಯ ಸದಸ್ಯರು ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಪ್ರಮುಖ ಪಟ್ಟಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಕಾಶ್ಮೀರದ ಜೊತೆ ನಿರಂತರ ಸಂಪರ್ಕ ಹೊಂದಿರುವ ಇವರು, ಹಲವು ದಿನಗಳ ಕಾಲ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ಹಾಕಿಕೊಂಡಿರುವ ಬಗ್ಗೆ ತಿಳಿದುಬಂದಿದೆ.