ವಿಟ್ಲ: ಆರ್.ಕೆ.ಯಕ್ಷಗಾನ ಕಲಾ ಕೇಂದ್ರ ವಿಟ್ಲ ಇದರ ಆಶ್ರಯದಲ್ಲಿ ರಂಗಪ್ರವೇಶ ಮತ್ತು ಮಕ್ಕಳ ಯಕ್ಷಗಾನ ಕಾರ್ಯಕ್ರಮವು ನ.೧೨ರಂದು ಶನಿವಾರ ಸಂಜೆ ೪.೩೦ಕ್ಕೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುರು ಸಬ್ಬಣಕೋಡಿ ರಾಮ ಭಟ್ರವರ ನಿರ್ದೇಶನದಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳ ರಂಗಪ್ರವೇಶ ಹಾಗೂ ಮಕ್ಕಳ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ ೪.೩೦ಕ್ಕೆ ಶ್ರೀ ಪಂಚಲಿಂಗೇಶ್ವರ ದೇವರ ಪ್ರಾರ್ಥನೆ ಮತ್ತು ಚೌಕಿ ಪೂಜೆ ನಡೆಯಲಿದೆ. ಸಂಜೆ ೫ರಿಂದ ೬ಕ್ಕೆ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕಲಾ ಕೇಂದ್ರ ಪೆರ್ಲದ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ನಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.


ಸಭಾಧ್ಯಕ್ಷತೆಯನ್ನು ಬಂಗಾರು ಅರಸರು, ವಿಟ್ಲ ಅರಮನೆ ಅನುವಂಶಿಕ ಆಡಳಿತ ಮೊಕ್ತೇಸರರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಕೃಷ್ಣಯ್ಯ ಕೆ ವಿಟ್ಲ ಅರಮನೆ ಗೌರವಾಧ್ಯಕ್ಷರು, ಆರ್.ಕೆ ಯಕ್ಷಗಾನ ಕಲಾ ಕೇಂದ್ರ ವಿಟ್ಲ, ಸರಪಾಡಿ ಅಶೋಕ್ ಶೆಟ್ಟಿ ಅಧ್ಯಕ್ಷರು, ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ದ.ಕ ಜಿಲ್ಲೆ, ಆದರ್ಶ ಚೊಕ್ಕಾಡಿ ಪ್ರಾಂಶುಪಾಲರು, ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇವರು ಭಾಗವಹಿಸಲಿದ್ದಾರೆ.
ಈ ವೇಳೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಸಂಜೆ ೭ ಕ್ಕೆ ಆರ್.ಕೆ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಬ್ಬಣ್ಣಕೋಡಿ ರಾಮ ಭಟ್ರವರ ನಿರ್ದೇಶನದಲ್ಲಿ ವೀರ ಬಬ್ರುವಾಹನ-ವೀರವರ್ಮ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


