ದೂರದ ಯು.ಎ.ಇ ಯಲ್ಲಿ ನೆಲೆಸಿರುವ ಭಾರತೀಯರನ್ನು ಪ್ರಪಂಚದ ಇತರ ದೇಶಗಳಲ್ಲಿನ ಭಾರತೀಯರೊಡನೆ ಸಾಂಸ್ಕೃತಿಕವಾಗಿ ಬೆಸೆಯುವ ಉದ್ದೇಶದಿಂದ 2014 ರಲ್ಲಿ ಯು.ಎ. ಇಯಲ್ಲಿ ಸ್ಥಾಪಿತವಾಗಿರುವ ಇಂಡಿಯನ್ ಪೀಪಲ್ಸ್ ಫೋರಂ ಅರಬ್ ಸಂಯುಕ್ತ ಸಂಸ್ಥಾನದ (ಯು.ಎ. ಇ) ಕರ್ನಾಟಕ ರಾಜ್ಯ ಕೌನ್ಸಿಲ್ ಘಟಕದ ಪ್ರಥಮ ಸಂಚಾಲಕರಾಗಿ ಶಶಿಧರ್ ನಾಗರಾಜಪ್ಪ ಅ.18ರಂದು ಅಧಿಕಾರ ಸ್ವೀಕರಿಸಿದರು .
ದುಬೈನ ಖಾಸಗಿ ಹೋಟೆಲ್ ನಲ್ಲಿ ನಡೆದ ಅಧಿಕಾರ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ದ ವಿಶೇಷ ಅತಿಥಿಗಳಾಗಿ ಭಾರತದ ಕೇಂದ್ರ ಸರಕಾರದ ಮಾಜಿ ಸಚಿವ ಡಾ||ವಲ್ಲಭ ಭಾಯಿ ಕತಿರಿಯಾ ಹಾಗೂ ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಡಾ||ಬೇಳೂರು ರಾಘವೇಂದ್ರ ಶೆಟ್ಟಿಯವರು ಪಾಲ್ಗೊಂಡಿದ್ದರು.
ಇದೇ ಸಮಾರಂಭದಲ್ಲಿ ಯು.ಎ.ಇಯ ಕನ್ನಡಿಗರ ಧ್ವನಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿಯವರು ಕೂಡ , ಕರ್ನಾಟಕ ರಾಜ್ಯ ಕೌನ್ಸಿಲ್ ಘಟಕದ ಪ್ರಥಮ ಸಹ ಸಂಚಾಲಕರಾಗಿ ಅಧಿಕಾರ ಸ್ವೀಕರಿಸಿದರು.
ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಇಂಡಿಯನ್ ಪೀಪಲ್ಸ್ ಫೋರಂ , ಯು.ಎ.ಇ ಯ ಉಪಾಧ್ಯಕ್ಷ ಶಿಲ್ಪಾ ನಾಯರ್ ಅವರು ಚಾಲನೆ ನೀಡಿದರು. ಅಧ್ಯಕ್ಷ ಡಾ||ಜೀತೇಂದ್ರ ವೈದ್ಯರವರು ಎಲ್ಲರನ್ನು ಸ್ವಾಗತಿಸಿ ಸಂಘಟನೆಯ ಉದ್ದೇಶ ಹಾಗೂ ಚಟುವಟಿಕೆ ಗಳನ್ನು ವಿವರಿಸಿದರು . ಸಂಘಟನೆಯ ಇನ್ನೋರ್ವ ಉಪಾಧ್ಯಕ್ಷ ಸುಚಿತ್ ಕಾರ್ಯಕ್ರಮ ನಿರೂಪಿಸಿದರು.
ಶಶಿಧರ್ ನಾಗರಾಗಪ್ಪನವರ ಕಿರು ಪರಿಚಯ: ಇದೆ ಮೊದಲ ಬಾರಿಗೆ ಇಂಡಿಯನ್ ಪೀಪಲ್ಸ್ ಫೋರಂ ಅರಬ್ ಸಂಯುಕ್ತ ಸಂಸ್ಥಾನದ (ಯು.ಎ. ಇ) ಕರ್ನಾಟಕ ರಾಜ್ಯ ಕೌನ್ಸಿಲ್ ಘಟಕದ ಪ್ರಥಮ ಸಂಚಾಲಕರಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ.ಶಶಿಧರ್ ನಾಗರಾಜಪ್ಪನವರು ಮೂಲತಃ ಚಿತ್ರದುರ್ಗ ಜಿಲ್ಲೆ ಭರಮ ಸಾಗರದವರು. ಶ್ರೀಮತಿ ಸುವರ್ಣಮ್ಮ ಮತ್ತು ಶ್ರೀ ನಾಗರಾಜಪ್ಪನವರ ಮೂರನೇ ಮಗನಾಗಿ ಸೆಪ್ಟೆಂಬರ್10,1977ರಲ್ಲಿ ಜನಿಸಿದರು .
ಕಳೆದ 20 ವರ್ಷಗಳಿಂದ ಯು.ಎ. ಇಯಲ್ಲಿ ನೆಲೆಸಿರುವ ಇವರು ಸದಾ ಕನ್ನಡ ನಾಡು , ನುಡಿಗಳ ಸೇವೆಯನ್ನು ಮಾಡುತ್ತ ಬಂದಿದ್ದಾರೆ.
ಇವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ಕನ್ನಡ ಮಿತ್ರರು ಯು.ಎ. ಇ. ಸಂಘಟನೆ ನಡೆಸುತ್ತಿರುವ “ಕನ್ನಡ ಪಾಠಶಾಲೆ ದುಬೈ ” , ಇಂದು ಪ್ರಪಂಚದ ಅತಿದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರ ಎಂಬುದು ಇವರ ಕನ್ನಡ ಪ್ರೀತಿಗೆ ಹಿಡಿದ ಕೈಗನ್ನಡಿ.
ಅಷ್ಟೇ ಅಲ್ಲದೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ( KNRI)ನ ಜಂಟಿ ಕಾರ್ಯದರ್ಶಿಗಳಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.