ಕೋವಿಡ್ ಲಾಕ್ಡೌನ್ನಿಂದ ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕೆಎಸ್ಆರ್ಟಿಸಿ ಬಸ್ ಸಂಚಾರ ಪ್ರಾರಂಭಗೊಂಡಿದೆ. ಜು.5ರಿಂದ ಅನ್ಲಾಕ್ 3.0 ಜಾರಿಯಾಗಲಿದ್ದು ಜನರ ಬೇಡಿಕೆಯಂತೆ ಬಸ್ಗಳು ಎಲ್ಲಾ ರೂಟ್ಗಳಲ್ಲಿಯೂ ಸಂಚರಿಸಲಿದೆ. ಸ್ಕೂಲ್ ಟ್ರಿಪ್ ಹೊರತುಪಡಿಸಿ ಉಳಿದ ಎಲ್ಲಾ ರೂಟ್ಗಳಲ್ಲಿಯೂ ಬಹುತೇಕವಾಗಿ ಬಸ್ ಸಂಚರಿಸಲಿದೆ.
ಮೈಸೂರು, ಮಡಿಕೇರಿ, ಕೊಡಗುಗಳಲ್ಲಿ ಲಾಕ್ಡೌನ್ ನಿರ್ಬಂಧ ತೆರವುಗೊಳಿಸದ ಹಿನ್ನೆಲೆಯಲ್ಲಿ ಬಸ್ ಸಂಚಾರವಿರುವುದಿಲ್ಲ. ಬೆಂಗಳೂರಿಗೆ ಹಾಸನ ಮೂಲಕ ಮಾತ್ರ ಬಸ್ಗಳು ಸಂಚರಿಸಲಿವೆ. ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಎಲ್ಲಾ ರೂಟ್ಗಳಲ್ಲಿಯೂ ಸಾರ್ವಜನಿಕರ ಬೇಡಿಕೆಗೆ ಅಣುಗುಣವಾಗಿ ಬಸ್ಗಳು ಓಡಾಟ ನಡೆಸಲಿದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದಿನಿಂದ ರಾತ್ರಿ 9ರವರೆಗೆ ಖಾಸಗಿ ಬಸ್ಗಳ ಓಡಾಟ:
ಕೋವಿಡ್ ಎರಡನೇ ಅಲೆ ತಡೆಗಟ್ಟಲು ಹೇರಿದ್ದ ನಿರ್ಬಂಧಗಳ ಪೂರ್ಣ ಪ್ರಮಾಣದ ಅನ್ಲಾಕ್-3 ಘೋಷಣೆಯ ಬೆನ್ನಲ್ಲೇ ಜು.5ರಿಂದ 19ರವರೆಗೆ ರಾತ್ರಿ 9 ಗಂಟೆವರೆಗೆ ಖಾಸಗಿ ಬಸ್ಗಳ ಓಡಾಟಕ್ಕೂ ಅವಕಾಶ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲೂ ಜು.5ರಿಂದ ರಾತ್ರಿ 9 ಗಂಟೆವರೆಗೆ ಖಾಸಗಿ ಬಸ್ಗಳು ಸಾರಿಗೆ ಸೇವೆ ನೀಡಲು ಸಜ್ಜಾಗಿವೆ.
ರಾಜ್ಯ ಸರಕಾರದ ಪರಿಷ್ಕೃತ ಆದೇಶದಲ್ಲಿ ರಾತ್ರಿ 9 ಗಂಟೆವರೆಗೆ ಬಸ್ಗಳನ್ನು ಓಡಿಸಲು ಅನುಮತಿಸಲಾಗಿದೆ. ಜಿಲ್ಲೆಯಲ್ಲಿ ರಾತ್ರಿ 9ರ ಒಳಗಾಗಿ ಬಸ್ ಸಂಚಾರ ನಿಲುಗಡೆಯಾಗಬೇಕು ಹಾಗಾಗಿ ಕೊನೆಯ ಟ್ರಿಪ್ನ್ನು ಕಡಿತ ಮಾಡುವ ಅಗತ್ಯವಿದೆ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿದ್ದಾರೆ.