ಉತ್ತರಪ್ರದೇಶದಲ್ಲಿಯೇ ಅತ್ಯಂತ ದೊಡ್ಡ ನಾಲಾ ಯೋಜನೆ ಎನಿಸಲಿರುವ ಬಲರಾಂಪುರ ಜಿಲ್ಲೆಯ ಸರಯೂ ನಾಲೆ ರಾಷ್ಟ್ರೀಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ. ಈ ಯೋಜನೆಗೆ 9802 ಕೋಟಿ ರೂಪಾಯಿ ವೆಚ್ಚ ತಗುಲಿದ್ದು ಇಲ್ಲಿನ 9 ಜಿಲ್ಲೆಗಳಾದ ಬಹ್ರೈಚ್, ಗೊಂಡಾ, ಶ್ರಾವಸ್ತಿ, ಬಲರಾಮ್ಪುರ, ಬಸ್ತಿ, ಸಿದ್ಧಾರ್ಥನಗರ, ಸಂತ ಕಬೀರ್ ನಗರ, ಗೋರಖ್ಪುರ ಮತ್ತು ಮಹಾರಾಜ್ಗಂಜ್ ಗಳ ಸುಮಾರು 25-30 ಲಕ್ಷ ರೈತರಿಗೆ ನೀರಾವರಿ ಅನುಕೂಲ ಮಾಡಿಕೊಡಲಿದೆ.
ಈ ಯೋಜನೆಯಡಿ 5 ನದಿಗಳಾದ ಘಾರ್ಗಾ, ಸರಯೂ, ರಾಫ್ತಿ, ಬಂಗಂಗಾ ಮತ್ತು ರೋಹಿನ್ ನದಿಗಳನ್ನು ಸಂಪರ್ಕಿಸಲಾಗಿದೆ. ಹಾಗೇ, 6600 ಕಿಮೀ ದೂರದ ಹಲವು ಉಪಕಾಲುವೆಗಳು 318 ಕಿಮೀ ಉದ್ದದ ಮುಖ್ಯ ನಾಲೆಯನ್ನು ಸಂಪರ್ಕಿಸುತ್ತವೆ. ಒಟ್ಟಾರೆ 14.04 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಹಾಗೇ ಮಳೆಗಾಲದಲ್ಲಿ ನೇಪಾಳದಿಂದ ಬರುವ ನೀರಿನ ಮಟ್ಟವನ್ನು ಕುಗ್ಗಿಸುವ ಮೂಲಕ, ಪ್ರವಾಹ ಭೀತಿಯನ್ನು ಕಡಿಮೆ ಮಾಡಲಿದೆ.
ಈ ಯೋಜನೆಯನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ 1978ರಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭ ಮಾಡಿತ್ತು. ಎರಡು ಜಿಲ್ಲೆಗಳಿಗೆ ಅನುಕೂಲವಾಗುವಂತೆ 78.68 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿತ್ತು. ಅದಾದ ನಾಲ್ಕು ವರ್ಷಗಳ ನಂತರ ಅಂದರೆ 1982ರಲ್ಲಿ 9 ಜಿಲ್ಲೆಗಳಿಗೆ ವಿಸ್ತರಿಸಲಾಯಿತು ಮತ್ತು ಯೋಜನೆಯ ಹೆಸರನ್ನು ಸರಯೂ ಕಾಲುವೆ ಯೋಜನೆಯೆಂದು ಹೆಸರಿಡಲಾಯಿತು. ಹಾಗೇ. 2021ರ ಹೊತ್ತಿಗೆ ಯೋಜನೆಗೆ 9802 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಲಾಯಿತು.
ಸರಯೂ ರಾಷ್ಟ್ರೀಯ ಯೋಜನೆಯಲ್ಲಿ ಶೇ.52ರಷ್ಟು ಕೆಲಸವನ್ನು ಪೂರ್ಣಗೊಳಿಸಲು 40 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ನಾವು ಉಳಿದ ಶೇ.48ರಷ್ಟು ಕೆಲಸವನ್ನು ಕೇವಲ 4 ವರ್ಷಗಳಲ್ಲಿ ಮಾಡಿದ್ದೇವೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸರಯೂ ರಾಷ್ಟ್ರೀಯ ಯೋಜನೆಯಲ್ಲಿ ಶೇ.52ರಷ್ಟು ಕೆಲಸವನ್ನು ಪೂರ್ಣಗೊಳಿಸಲು 40 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ನಾವು ಉಳಿದ ಶೇ.48ರಷ್ಟು ಕೆಲಸವನ್ನು ಕೇವಲ 4 ವರ್ಷಗಳಲ್ಲಿ ಮಾಡಿದ್ದೇವೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.