ಉಡುಪಿ : ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಬೋಟ್ ನಿಂದ ಮೀನುಗಾರನೊಬ್ಬ ಆಯತಪ್ಪಿ ಬೋಟ್ ನಿಂದ ಸಮುದ್ರಕ್ಕೆ ಬಿದ್ದು, ಬರೋಬ್ಬರಿ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಬದುಕುಳಿದ ಅಪರೂಪದ ಘಟನೆ ನಡೆದಿದೆ.
ಬೈಂದೂರು ತಾಲೂಕಿನ ಗಂಗೊಳ್ಳಿ ಮೂಲದ ಸಾಗರ್ ಬೋಟ್ನ ಮೀನುಗಾರರು 43 ಗಂಟೆಗಳ ಬಳಿಕ ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ 8 ಜನರ ತಂಡ ಆಳ ಸಮುದ್ರ ಮೀನುಗಾರಿಕೆಗೆ ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಈ ತಂಡದಲ್ಲಿ ಇದ್ದ ಮುರುಘನ್ (25) ಎಂಬ ಮೀನುಗಾರ ಶನಿವಾರ ರಾತ್ರಿ ಮೂತ್ರ ವಿಸರ್ಜನೆಗೆ ಬೋಟ್ನ ಅಂಚಿಗೆ ಹೋಗುತ್ತಾನೆ. ಈ ವೇಳೆ ಜೋರಾದ ಗಾಳಿಗೆ ಮುರುಘನ್ ಆಯತಪ್ಪಿ ಸಮುದ್ರದಲ್ಲಿ ಬೀಳುತ್ತಾನೆ. ಮುರುಘನ್ ಸಮುದ್ರದಲ್ಲಿ ಬಿದ್ದಿರುವುದು ಉಳಿದ ಮೀನುಗಾರರಿಗೆ ತಿಳಿದಿರುವುದಿಲ್ಲ. ಎಷ್ಟು ಹೊತ್ತಾದರೂ ಮುರುಘನ್ ಒಳಗಡೆ ಬಾರದಿದ್ದರಿಂದ ಅನುಮಾನಗೊಂಡ ಉಳಿದ ಮೀನುಗಾರರು ಸಮುದ್ರದಲ್ಲಿ ಮುರುಘನನ್ನು ಹುಡುಕಲು ಆರಂಭಿಸುತ್ತಾರೆ. ಆದರೆ ಎರಡು ದಿನ ಕಳೆದರೂ ಮುರುಘನ್ಪತ್ತೆಯಾಗಲಿಲ್ಲ. ಕೊನೆಗೆ ತಮಿಳುನಾಡು ಮೀನುಗಾರರು ಮುರುಘನ್ ಮೃತಪಟ್ಟಿದ್ದಾನೆ ಎಂದು ಮಾಲಿಕನಿಗೆ ತಿಳಿಸುತ್ತಾರೆ.
ನವೆಂಬರ್ 10ರಂದು ಗಂಗೊಳ್ಳಿ ಮೂಲದ ಸಾಗರ್ ಬೋಟ್ನ ಮೀನುಗಾರರು, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದು, ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರ ಹೋದಾಗ ಮುರುಘನ್ನನ್ನು ಕಂಡಿದ್ದು, ಗಂಗೊಳ್ಳಿ ಮೀನುಗಾರರು ಮೀನು ಅಂದುಕೊಂಡು ಮುರುಘನ್ ಬಳಿ ಹೋದಾಗ ಆಶ್ಚರ್ಯವಾಗುತ್ತದೆ. ಮೀನಲ್ಲ ಮನುಷ್ಯನೆಂದು ತಿಳಿಯುತ್ತದೆ. ಕೊನೆಗೆ ಗಂಗೊಳ್ಳಿ ಮೀನುಗಾರರು ಮುರುಘನ್ನನ್ನು ರಕ್ಷಣೆ ಮಾಡುತ್ತಾರೆ. ಜೀವ ಉಳಿಸಿಕೊಳ್ಳಲು ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಮುರುಘನ್ ನಿತ್ರಾಣಗೊಂಡಿದ್ದನು. ಸರಿಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರ ಮುರುಘನ್ನನ್ನು ರಕ್ಷಣೆ ಮಾಡಲಾಗಿದೆ.