ನವದೆಹಲಿ: ರಾಷ್ಟ್ರೀಯ ವೈದ್ಯರ ದಿನವಾಗಿರುವ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೈದ್ಯ ಸಮುದಾಯವನ್ನು ಉದ್ದೇಶಿಸಿ ಮಾತಾಡಲಿದ್ದಾರೆ.

ಕೊವಿಡ್-19 ಪಿಡುಗಿನ ಎರಡನೇ ಅಲೆ ಹೊಡೆತದಿಂದ ಈಗಷ್ಟೇ ಚೇತರಿಸಿಕೊಂಡು ಮೂರನೇ ಅಲೆಯನ್ನು ಎದುರಿಸಲು ಭಾರತ ವೈದ್ಯಕೀಯ ಲೋಕ ಸನ್ನದ್ಧರಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಮನುಕುಲಕ್ಕೆ ನಿಸ್ವಾರ್ಥ ಮನೋಭಾವದಿಂದ ಒದಗಿಸುತ್ತಿರುವ ಸೇವೆ ಬಗ್ಗೆ ಪ್ರಧಾನ ಮಂತ್ರಿಗಳು ಮಾತಾಡಲಿರುವುದು ಈ ವೃತ್ತಿಯಲ್ಲಿರುವವರ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ.

ಬುಧವಾರ ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿಗಳು, ‘ಕೊವಿಡ್-19 ಪಿಡುಗಿನ ವಿರುದ್ಧ ಜಾರಿಯಲ್ಲಿರುವ ಯುದ್ಧದಲ್ಲಿ ವೈದ್ಯರು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಜುಲೈ 1 ರಾಷ್ಟ್ರೀಯ ವೈದ್ಯರ ದಿನವೆಂದು ಆಚರಿಸಲ್ಪಡುತ್ತದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ @IMAIndiaOrg ಆಯೋಜಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ನಾನು ವೈದ್ಯರ ಸಮುದಾಯವನ್ನು ಉದ್ದೇಶಿಸಿ ಮಾತಾಡಲಿದ್ದೇನೆ,’ಎಂದು ಹೇಳಿದ್ದಾರೆ.

ಪ್ರಧಾನಿಗಳೇ ಹೇಳಿದ ಹಾಗೆ ಸದರಿ ಕಾರ್ಯಕ್ರಮವನ್ನು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಮ್ಎ) ಆಯೋಜಿಸಲಿದೆ. ಕೋವಿಡ್-19 ಪಿಡುಗು ಅಪ್ಪಳಿಸಿದಾಗಿನಿಂದ ಅದರ ವಿರುದ್ಧ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿದ್ದಕೊಂಡು ಸಮುದಾಯ ಆರೋಗ್ಯ ಕಾರ್ಯಕರ್ತರು ನಿರ್ವಹಿಸುತ್ತಿರುವ ಪಾತ್ರವನ್ನು ಪ್ರಧಾನ ಮಂತ್ರಿಗಳು ಶ್ಲಾಘಿಸಿದ್ದಾರೆ. ಹಾಗೆಯೇ, ಭಾರತದ ಅಭಿವೃದ್ಧಿ ಹೊಂದುತ್ತಿರುವ ಎಕಾನಮಿ ಮತ್ತು ಅದರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಕ್ಷರಶಃ ಸ್ಥಗಿತಗೊಳಿಸಿರುವ ಕೋವಿಡ್-19 ಪಿಡುಗಿನ ಎರಡು ಅಲೆಗಳ ವಿರುದ್ಧ ಜೀವದ ಹಂಗು ತೊರೆದು ಎಡೆಬಿಡದೆ ಹೋರಾಡುತ್ತಿರುವ ಈ ಸಮುದಾಯಕ್ಕೆ ಪ್ರಧಾನಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ರವಿವಾರ ತಮ್ಮ ಮಾಸಿಕ ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದಲ್ಲೂ ಪ್ರಧಾನ ಮಂತ್ರಿಗಳು ವೈದ್ಯರ ಬಗ್ಗೆ ಮಾತಾಡಿ ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ಅವರು ನೀಡುತ್ತಿರವ ಕಾಣಿಕೆಯನ್ನು ಶ್ಲಾಘಿಸಿದರು.

ಪ್ರಖ್ಯಾತ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬಿಧನ್ ಚಂದ್ರ ರಾಯ್ ಅವರ ಗೌರವಾರ್ಥ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಅವರ ಜನ್ಮ ವಾರ್ಷಿಕೋತ್ಸವ ಮತ್ತು ಪುಣ್ಯತಿಥಿ ಜುಲೈ ಒಂದರಂದೇ ಬರುತ್ತವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿಸಿ ರಾಯ್ ಅವರನ್ನು ವೈದ್ಯನಾಗಿ, ಶಿಕ್ಷಣ ತಜ್ಞ, ದಾನಿ ಮತ್ತು ಸಮಾಜ ಸೇವಕನಾಗಿಯೂ ನೆನಪಿಸಿಕೊಳ್ಳಲಾಗುತ್ತದೆ.

1928 ರಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯನ್ನು ಹುಟ್ಟು ಹಾಕಿದ ಅವರು ನಂತರದ ದಿನಗಳಲ್ಲಿ ಭಾರತದ ವೈದ್ಯಕೀಯ ಪರಿಷತ್, ಭಾರತೀಯ ಮಾನಸಿಕ ಆರೋಗ್ಯ ಕೇಂದ್ರ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಮತ್ತು ಕೊಲ್ಕಾತ್ತಾದ ಪ್ರಪ್ರಥಮ ಸ್ನಾತಕೋತ್ತರ ಮೆಡಿಕಲ್ ಕಾಲೇಜು ಮೊದಲಾದವುಗಳನ್ನು ಸ್ಥಾಪಿಸಿದರು. ಅವರನ್ನು ಭಾರತ ರತ್ನ ಪುರಸ್ಕಾರದಿಂದ ಸನ್ಮಾನಿಸಲಾಗಿದೆ.

