ಉಡುಪಿ: ಉಡುಪಿಯಿಂದ ಕುಂದಾಪುರಕ್ಕೆ ಹೊರಟ ಖಾಸಗಿ ಬಸ್ಸಿನಲ್ಲಿ ಯುವತಿಯರಿಗೆ ಕಿರುಕುಳ ನೀಡಿದ ಯುವಕರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಪು ನಿವಾಸಿ ಕೀರ್ತಿ, ಉಚ್ಚಿಲ ನಿವಾಸಿಗಳಾದ ನವೀತ ಮತ್ತು ಸಚೀತಾ ಬಂಧಿತರು.
ಉಡುಪಿಯಿಂದ ಕುಂದಾಪುರಕ್ಕೆ ಹೊರಟ ಬಸ್ಸಿನಲ್ಲಿ ಮೂರ್ನಾಲ್ಕು ಯುವತಿಯರು ಬಸ್ ಏರಿ ಬ್ರಹ್ಮಾವರ ಕಡೆ ಹೊರಟಿದ್ದರು. ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಿದ್ದು, ಮೂವರು ಯುವಕರು ಉಡುಪಿಯಲ್ಲೇ ಹತ್ತಿದ್ದರು. ಬಸ್ ಉಡುಪಿ ಬಿಟ್ಟ ನಂತರ ಯುವಕರು ಪುಂಡಾಟ ಶುರುಮಾಡಿ ಯುವತಿಯರ ಜಡೆ ಎಳೆದು, ಮೈ ಕೈಮುಟ್ಟುತ್ತ ಕಿರುಕುಳ ನೀಡಲು ಶುರು ಮಾಡಿದ್ದರು. ಬಸ್ನಲ್ಲಿ ಕಡಿಮೆ ಪ್ರಯಾಣಿಕರು ಇದ್ದ ಕಾರಣ ಭಯಗೊಂಡ ಯುವತಿಯರು ಸಂತೆಕಟ್ಟೆಯಲ್ಲಿ ಬಸ್ ಇಳಿದಿದ್ದಾರೆ.
ಸಂತೆಕಟ್ಟೆಯಲ್ಲಿ ಮತ್ತೊಂದು ಬಸ್ ಏರಿ ಯುವತಿಯರು ಪ್ರಯಾಣ ಮುಂದುವರಿಸಿ, ಬಸ್ ನಿರ್ವಾಹಕನಿಗೆ ತಮಗಾದ ಕಿರುಕುಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವತಿಯರು ಪ್ರಯಾಣಿಸುತ್ತಿದ್ದ ಬಸ್ ಕಂಡಕ್ಟರ್ ಕುಂದಾಪುರ ಬಸ್ ಏಜೆಂಟರಿಗೆ ವಿಷಯ ಮುಟ್ಟಿಸಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ಸಿಗುವಂತೆ ಮಾಡಿದ್ದು ,ಪೊಲೀಸರು ವಿಷಯ ಗಂಭೀರವಾಗಿ ಪರಿಗಣಿಸಿ ಯುವಕರನ್ನು ಬಂಧಿಸಿದ್ದಾರೆ.