ಉಡುಪಿ: ಟೋಲ್ ಗೇಟ್ ಮುಂಭಾಗದ ಗೋಡೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಲ್ಲೇ ಇದ್ದ ಟೋಲ್ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ. ಇಂದು ನಸುಕಿನ ಜಾವ 2 ಗಂಟೆ ವೇಳೆ ವೇಗವಾಗಿ ಬಂದ ಕಾರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (44) ಮೃತಪಟ್ಟವರು.
ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಘವೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ, ಅವರು ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಟೋಲ್ ಗೇಟ್ ನಿರ್ಲಕ್ಷ ಹಾಗೂ ಸ್ಥಳೀಯರಿಗೆ ಮನ್ನಣೆ ನೀಡದಿರುವ ಕುರಿತು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಲ್ಪ ದಿನದ ಹಿಂದೆ ವಿವಿಧ ಸಂಘಟನೆಗಳು ಸೇರಿ ಎಚ್ಚರಿಕೆ ನೀಡಿದ್ದರೂ ಟೋಲ್ ಅಧಿಕಾರಿಗಳು ಸುಧಾರಿಸಿಲ್ಲ. ಮಾತ್ರವಲ್ಲದೆ ಟೋಲ್ ಮ್ಯಾನೇಜರ್ ಕರೆ ಸ್ವೀಕರಿಸಿಲ್ಲ. ರಾತ್ರಿ ಘಟನೆ ನಡೆದರು ಬೆಳಿಗ್ಗೆ ತನಕ ಸಂಬಂಧಿಸಿದ ಅಧಿಕಾರಿಗಳು ಬಂದಿಲ್ಲ. ಸೂಕ್ತ ಪರಿಹಾರ ನೀಡಿ ಕ್ರಮಕೈಗೊಳ್ಳದಿದ್ದರೆ ಟೋಲ್ ಗೇಟ್ ಎದುರು ಶವ ಇಟ್ಟು ಪ್ರತಿಭಟಿಸಲಾಗುವುದು ಸ್ಥಳೀಯರು ಎಚ್ಚರಿಕೆ ನೀಡಿದ್ದರು.
ಬಳಿಕ ಟೋಲ್ ಅಧಿಕಾರಿಗಳು ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದು ಸೂಕ್ತ ಪರಿಹಾರ ದೊರೆಯುವವರಗೆ ಹಿಂದಿರುಗುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಕೊಲ್ಲೂರು ಠಾಣಾಧಿಕಾರಿ ನಾಸೀರ್ ಹುಸೈನ್, ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಸೇರಿದಂತೆ ಮೊದಲಾದವರು ಸ್ಥಳಕ್ಕಾಗಮಿಸಿದ್ದರು.