ಉಡುಪಿ : ಕಾಪುವಿನಿಂದ ಎಂಟು ನಾಟಿಕಲ್ ಮೈಲಿ ದೂರದಲ್ಲಿ ಸಮುದ್ರದ ಮಧ್ಯದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಅಪಾಯದಲ್ಲಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿರುವ ಘಟನೆ ನಡೆದಿದೆ.
ಬಡನಿಡಿಯೂರಿನ ಭಾಸ್ಕರ್ ಎಂ. ಪುತ್ರನ್ ಎಂಬುವವರ ಒಡೆತನದ ಸ್ವರ್ಣಗೌರಿ ದೋಣಿ ಡಿ.30 ರಂದು ರಾತ್ರಿ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಜ.3ರಂದು ಕಾಪುವಿನಿಂದ ಎಂಟು ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಬಂಡೆಗೆ ತಾಗಿ ನೀರು ರಭಸವಾಗಿ ಹರಿಯಲಾರಂಭಿಸಿತ್ತು. ಹಲಗೆ ಹಾನಿಗೊಳಗಾದ ಕಾರಣ ದೋಣಿಯೊಳಗೆ ನೀರು ಬಂದಿದೆ. ಈ ವೇಳೆ ಸ್ವರ್ಣಗೌರಿ ದೋಣಿಯ ತಾಂಡೇಲಾ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವರುಣ ದೋಣಿಗೆ ಮಾಹಿತಿ ರವಾನಿಸಿದರು. ವರುಣ ದೋಣಿಯಲ್ಲಿದ್ದ ಮೀನುಗಾರರು ಸ್ವರ್ಣಗೌರಿ ದೋಣಿಯಲ್ಲಿದ್ದ ಸಿಬ್ಬಂದಿಯ ರಕ್ಷಣೆಗೆ ಧಾವಿಸಿ ಎಲ್ಲರನ್ನೂ ರಕ್ಷಿಸಿದರು. ಆದರೆ, ಬಂಡೆಗೆ ಡಿಕ್ಕಿ ಹೊಡೆದ ದೋಣಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಆದ್ದರಿಂದ ದೋಣಿಯಲ್ಲಿದ್ದ ಆರು ಸೆಟ್ ಬಲೆ, ಹಗ್ಗ, ಡ್ರಮ್ ವಿಂಚ್, ಇಂಜಿನ್ ಹಾಗೂ 2000 ಲೀಟರ್ ಡೀಸೆಲ್ ಸಮುದ್ರದಲ್ಲಿ ಕೊಚ್ಚಿ ಹೋಗಿವೆ. ಘಟನೆಯಿಂದ ಸುಮಾರು 30 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.