Sunday, May 19, 2024
spot_imgspot_img
spot_imgspot_img

ಉಡುಪಿ: ಮಹಿಳೆಗೆ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ ಪ್ರಕರಣ; ಆರೋಪಿಯ ಬಂಧನ

- Advertisement -G L Acharya panikkar
- Advertisement -

ಉಡುಪಿ​: ಕೊರ್ಗಿಯಲ್ಲಿ ಮಹಿಳೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಆಕೆಯ ಮೈಮೇಲಿದ್ದ 1,60,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ತಾಲೂಕಿನ ತ್ರಾಸಿ ಹೊಸಾಡು ಗ್ರಾಮದ ಭಾರತ್ ನಗರ ನಿವಾಸಿ ಪ್ರವೀಣ್ ( 24) ಬಂಧಿತ ಆರೋಪಿ. ಆರೋಪಿಯಿಂದ ಆತ ಸುಲಿಗೆ ಮಾಡಿದ ಚಿನ್ನದ ಉಂಗುರ, ಗುಜ್ಜಾಡಿ ಸೊಸೈಟಿಯಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡಿರುವ ನಗದು ಸೇರಿ ಒಟ್ಟು 41 ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಡಿನಬೆಟ್ಟು ನಿವಾಸಿ ಅಶೋಕ ಪೂಜಾರಿ ಅವರ ಪತ್ನಿ ದೇವಕಿ ಪೂಜಾರಿ (32 ) ಅವರು ಶಾಲಾ ಬಸ್‌ನಲ್ಲಿ ಬರುವ ಮಗನನ್ನು ಕರೆ ತರಲೆಂದು ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ಕೊರ್ಗಿ ಕ್ರಾಸ್ ಸಮೀಪ ಕಾಡಿನಬೆಟ್ಟು ಕಡೆಗೆ ಹೋಗುವ ರಸ್ತೆ ಬಳಿಯಲ್ಲಿ ನಿಂತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯು ದೇವಕಿ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಗಂಭೀರ ಹಲ್ಲೆ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಅಂದಾಜು ಎರಡು ಪವನಿನ ಚಿನ್ನದ ಕರಿಮಣಿ ಸರ, ಎರಡೂವರೆ ಪವನ್ ತೂಕದ ಬಳೆ, ಅರ್ಧ ಪವನ್ ಉಂಗುರ ಸೇರಿ ಒಟ್ಟು 1,60,000 ರೂ. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಹಾಲಾಡಿ ರಸ್ತೆ ಹಾಗೂ ಕುಂದಾಪುರ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಗಂಗೊಳ್ಳಿಯ ತ್ರಾಸಿಯಲ್ಲಿ ಬುಧವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದೇ ವೇಳೆ ಆರೋಪಿ ಕೃತ್ಯಕ್ಕೆ ಬಳಸಿದ್ದ ಕೆಎ 20 ವಿ 8394 ನಂಬರ್‌ನ ಮೋಟಾರ್‍ ಸೈಕಲ್‌ನ್ನೂ ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. ಕುಂದಾಪುರ ಉಪವಿಭಾಗ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್‌. ಅವರ ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ನಿರಂಜನ್ ಗೌಡ ಬಿ. ಎಸ್‌. ಹಾಗೂ ಕುಂದಾಪುರ ಗ್ರಾಮಾಂತರ ಠಾಣಾ ಸಿಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ಆರೋಪಿ ಪತ್ತೆಗಾಗಿ ರಚಿಸಲಾಗಿತ್ತು.

ವಿಶೇಷ ತಂಡದಲ್ಲಿದ್ದ ನಿರಂಜನ್ ಗೌಡ ಬಿ.ಎಸ್‌. ಪಿಎಸ್‌ಐ ( ಕಾ&ಸು) ಮತ್ತು ಕುಂದಾಪುರ ಗ್ರಾಮಾಂತರ ಠಾಣೆಯ ಸಿಬಂದಿಯವರಾದ ರಾಜುಬಿ., ಅನಿಲ್ ಕುಮಾರ್, ಚಿದಾನಂದ, ಜೀಪು ಚಾಲಕ ಆನಂದ, ಕುಂದಾಪುರ ಉಪವಿಭಾಗ ಅಪರಾಧ ಪತ್ತೆ ದಳದ ರಾಮು ಹೆಗಡೆ ಮತ್ತು ರಾಘವೇಂದ್ರ ಉಪ್ಪುಂದ ಹಾಗೂ ತಾಂತ್ರಿಕ ವಿಭಾಗದ ಸಿಬಂದಿ ದಿನೇಶ್ ಅವರು ಪ್ರಕರಣದ ಪತ್ತೆಗೆ ಸಹಕರಿಸಿದ್ದಾರೆ. ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!