ಉಡುಪಿ: ಕಳೆದ ಫೆ.14 ರಂದು ಹಾಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಈ ಘಟನೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ತನಿಖೆ ಬೆನ್ನು ಹತ್ತಿದ ಪೊಲೀಸರಿಗೆ ನಿಜಾಂಶ ತಿಳಿದುಬಂದಿದೆ. ದೂರದ ಸಂಬಂಧಿಯೋರ್ವ ಪ್ಲಾನ್ ಮಾಡಿ ಕರೆಸಿಕೊಂಡು ಮಡರ್ರ್ ಮಾಡಿದ್ದಾನೆ. ತೆಗೆದುಕೊಂಡ ೯ ಲಕ್ಷ ಹಣವನ್ನು ತಿರುಗಿಸಿ ಕೊಡಬೇಕೆಂಬ ಕಾರಣಕ್ಕೆ ಜೀವವನ್ನೇ ಕಸಿದುಕೊಂಡಿದ್ದಾನೆ…! ಆತ್ಮಹತ್ಯೆಯ ನಾಟಕಕ್ಕೆ ಮಹಿಳೆಯೋರ್ವಳನ್ನು ಬಳಸಿಕೊಂಡಿದ್ದ ಆರೋಪಿ ಕಂಬಿ ಎಣಿಸಿದ್ದಾನೆ..
ಈ ಘಟನೆ ನಡೆದಿರುವುದು ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಕಳೆದ ಫೆ.14 ರಂದು ಕುಕ್ಕೆಹಳ್ಳಿಯ ಕೃತಿಕ್ ಜೆ ಸಾಲಿಯಾನ್ ಮೃತದೇಹ ತನ್ನ ಮನೆಯ ಅನತಿ ದೂರದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿನ ಬಗ್ಗೆ ಸಂಶಯವ್ಯಕ್ತಪಡಿಸಿ ಕೃತಿಕ್ ಅತ್ತೆ ಶೈಲಜಾ ಕರ್ಕೇರಾ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿದಾಗ ಕೃತಿಕ್ ನ ದೂರದ ಸಂಬಂದಿ ಬ್ರಹ್ಮಾವರದ ಹೋಟೇಲ್ ಉದ್ಯಮಿ ದಿನೇಶ್ ಸಫಲಿಗಾ ಕೃತಿಕ್ ನನ್ನು ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ: ಈ ಬಗ್ಗೆ ದಿನೇಶ್ ಸಫಲಿಗಾ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಿನೇಶನು ಕೃತಿಕ್ ನಿಂದ 9 ಲಕ್ಷ ಹಣದ ಪಡೆದಿದ್ದ, ಈ ನಡುವೆ ಹಣವನ್ನು ವಾಪಸ್ ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ದಿನೇಶ್ ಕೃತಿಕ್ ನನ್ನು ಕೊಲೆ ಮಾಡುವ ಸ್ಕೆಚ್ ಹಾಕಿದ್ದಾನೆ. ಈ ಉದ್ದೇಶದಿಂದ ಮಹಿಳೆಯನ್ನು ಪರಿಚಯಿಸುವುದಾಗಿ ಕೃತಿಕ್ ನನ್ನು ಹಾಡಿಗೆ ಕರೆದುಕೊಂಡು ಹೋಗಿದ್ದಾನೆ. ಮಹಿಳೆಯೊಂದಿಗೆ ವಿಡಿಯೋ ಕಾಲ್ ನಲ್ಲಿ ಆತ್ಮಹತ್ಯೆ ನಾಟಕವಾಡುವ ನೆಪದಲ್ಲಿ ಕೃತಿಕ್ ನ್ನು ಹತ್ಯೆ ಗೈದಿದ್ದಾನೆ ಎಂದು ದಿನೇಶ್ ಸಫಲಿಗಾ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಇನ್ನಷ್ಟೇ ಲಭ್ಯವಾಗಬೇಕಿದೆ.