ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿದೆ. ಬಹುತೇಕ ಮತಗಟ್ಟೆ ಸಮೀಪಕ್ಷೆಗಳು ಬಿಜೆಪಿಗೆ ಮುನ್ನಡೆ ಸಿಗಲಿದೆ ಎಂದು ಹೇಳಿದ್ದರೂ ಸಮಾಜವಾದಿ ಪಕ್ಷವೂ ಸಾಕಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದಿವೆ. ವಿದ್ಯುನ್ಮಾನ ಮತಯಂತ್ರಗಳ (Electronic Voting Machine – EVM) ಬಗ್ಗೆಯೇ ಎರಡೂ ಪಕ್ಷಗಳು ವಾಗ್ವಾದಕ್ಕೆ ಇಳಿದಿವೆ.
ಇವಿಎಂಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಸ್ಥಳಾಂತರಿಸಿದ ಆರೋಪದ ಮೇಲೆ ಮೂವರು ಅಧಿಕಾರಿಗಳನ್ನು ಬುಧವಾರ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ವಾರಾಣಸಿ ಕ್ಷೇತ್ರದ ಓರ್ವ ನೋಡೆಲ್ ಅಧಿಕಾರಿ, ಸೌಭದ್ರ ಜಿಲ್ಲೆಯ ಓರ್ವ ರಿಟರ್ನಿಂಗ್ ಆಫೀಸರ್ ಮತ್ತು ಬರೇಲಿ ಜಿಲ್ಲೆಯ ಓರ್ವ ಹೆಚ್ಚುವರಿ ಚುನಾವಣಾ ಅಧಿಕಾರಿಯನ್ನು ಮತಎಣಿಕೆಗೆ ಒಂದು ದಿನ ಮೊದಲು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಚುನಾವಣಾ ಕಾರ್ಯದಲ್ಲಿ ಸಮಾಜಘಾತುಕ ಶಕ್ತಿಗಳನ್ನು ತೊಡಗಿಸಲು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.
ಉತ್ತರ ಪ್ರದೇಶ ರಾಜಕಾರಣದಲಲ್ಲಿ ಬಿಜೆಪಿ, ಎಸ್ಪಿ, ಕಾಂಗ್ರೆಸ್ ಮತ್ತು ಬಿಎಸ್ಪಿ ಮುಖ್ಯ ಭೂಮಿಕೆಯಲ್ಲಿವೆ. ಅನುಪ್ರಿಯಾ ಪಟೇಲರ ಅಪತ್ನಾ ದಳ್ (ಎಸ್) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 18 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಸಂಜಯ್ ನಿಶಾದ್ರ ನಿಶಾದ್ ಪಕ್ಷವೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮತ್ತು ಸುಹೇಲ್ದೇವ್ ಭಾರತೀಯ ಸಮಾಜವಾದಿ ಪಕ್ಷಗಳೊಂದಿಗೆ (ಎಸ್ಬಿಎಸ್ಪಿ) ಮೈತ್ರಿ ಮಾಡಿಕೊಂಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು ಮತ್ತು ಸಮಾಜವಾದಿ ಪಕ್ಷಕ್ಕೆ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 4,441 ಅಭ್ಯರ್ಥಿಗಳ ಭವಿಷ್ಯವನ್ನು ಇಂದಿನ ಫಲಿತಾಂಶ ನಿರ್ಧರಿಸುತ್ತದೆ.