ಉಪ್ಪಿನಂಗಡಿ: ಪಾಪ್ಯುಲರ್ ಫ್ರಂಟ್ ಉಪ್ಪಿನಂಗಡಿ ಮುಖಂಡರ ಬಂಧನದ ವಿರುದ್ಧ ಸಾರ್ವಜನಿಕರಿಂದ ಉಪ್ಪಿನಂಗಡಿ ಠಾಣೆಗೆ ಮುತ್ತಿಗೆ ಹಾಕಲಾಗಿದೆ.
ಕೆಲ ದಿನಗಳ ಹಿಂದೆ ಉಪ್ಪಿನಂಗಡಿ ಹಳೆಗೇಟು ಬಳಿ ನಡೆದ ತಲುವಾರು ದಾಳಿಗೆ ಸಂಬಂಧಿಸಿದಂತೆ ಮೂವರು ಪಿ ಎಫ್ ಐ ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆ ತಂದಿದ್ದು, ಈ ಬಗ್ಗೆ ವಿಷಯ ತಿಳಿದ ಪಿ ಎಫ್ ಐ ಕಾರ್ಯಕರ್ತರು ಪೊಲೀಸ್ ಠಾಣೆಯ ಬಳಿ ಜಮಾಯಿಸಿದ ಘಟನೆ ನಡೆದಿದೆ.
ಬಿಡುಗಡೆಗೊಳಿಸುವ ತನಕ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಪಿಎಫ್ಐ ಸ್ಥಳೀಯ ಮುಖಂಡರುಗಳಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಕಡವಿನಬಾಗಿಲು, ಝಕರಿಯಾ ಎಂಬುವವರು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ತಲವಾರು ದಾಳಿಯಲ್ಲಿ ನಿರಪರಾಧಿಗಳಿಗೆ ಅನ್ಯಾಯವಾಗಬಾರದೆಂಬ ಕಾರಣಕ್ಕೆ ಪೊಲೀಸರ ಜೊತೆ ಮಾತನಾಡಲು ಬಂದ ಸಂದರ್ಭದಲ್ಲಿ ಪೊಲೀಸರು ಈ ಮೂವರು ಮುಖಂಡರನ್ನು ಠಾಣೆಯಲ್ಲಿ ಕೂರಿಸಿ ಬಂಧಿಸಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ.