ಉಳ್ಳಾಲ: ಗೃಹಿಣಿಯೋರ್ವಳು ಗಂಡನ ಮನೆಯಲ್ಲಿ ನಿಗೂಢ ಸಾವನ್ನಪ್ಪಿದ ಘಟನೆ ಉಳ್ಳಾಲ ಮುಕ್ಕಚ್ಚೇರಿ ಎಂಬಲ್ಲಿ ನಡೆದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯನ್ನು ಜಂಶೀರ (25) ಎಂದು ಗುರುತಿಸಲಾಗಿದೆ. ಮೂಲತಃ ಮಿಲ್ಲತ್ ನಗರ ನಿವಾಸಿಯಾದ ಜಂಶೀರಾಗೆ ಎರಡು ವರ್ಷಗಳ ಹಿಂದೆ ಮುಕ್ಕಚ್ಚೇರಿ ನಿವಾಸಿ ಇರ್ಫಾನ್ ಜೊತೆ ವಿವಾಹವಾಗಿತ್ತು. ದಂಪತಿಗೆ 8 ತಿಂಗಳ ಮಗು ಇದೆ. ವಿವಾಹ ಆದ ಆರಂಭದಲ್ಲೇ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಹಿರಿಯರು ಸೇರಿ ಮಾತುಕತೆ ನಡೆಸಿ ದಂಪತಿ ನಡುವಿನ ಕಲಹ ಶಮನಗೊಳಿಸುತ್ತಿದ್ದರು. ಭಾನುವಾರ ಸಂಜೆಯೂ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ಘಟನೆ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ. ಜಂಶೀರಾ ಸಹೋದರಿಗೆ ಆಕೆಯ ಗಂಡನ ಮನೆಯವರಿಂದ ಫೋನ್ ಕರೆ ಬಂದಿದ್ದು ಜಂಶೀರಾ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಆದರೆ ಮನೆಮಗಳ ನಿಗೂಢ ಸಾವಿನ ಬಗ್ಗೆ ಜಂಶೀರಾ ಪೋಷಕರು ಶಂಕೆ ವ್ಯಕ್ತ ಪಡಿಸಿದ್ದಾರೆ. ಮೃತ ಜಂಶೀರಳ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸಾವಿನ ಹಿಂದಿನ ಅಸಲಿಯತ್ತು ಬೆಳಕಿಗೆ ಬರಲಿದೆ ಎನ್ನುವ ಮಾಹಿತಿಗಳಿವೆ. ಈ ನಡುವೆ, ಉಳ್ಳಾಲ ಪೊಲೀಸರು ಮೃತ ಜಂಶೀರಾಳ ಪತಿ ಇರ್ಫಾನ್ ನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.