

ಮುಖದ ಕ್ಯಾನ್ಸರ್ಗೆ ತುತ್ತಾಗಿದ್ದ ಬಾಲಕನಿಗೆ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನಡೆಸಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆಹಾರ ಸೇವನೆ ಮಾತ್ರವಲ್ಲ, ಉಸಿರಾಟಕ್ಕೂ ಪರಿತಪಿಸುತ್ತಿದ್ದ ಕೊಪ್ಪದ 17 ವರ್ಷದ ಬಾಲಕನಿಗೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನಡೆಸುವ ಮೂಲಕ ಮಾನವೀಯತೆಗೆ ಮಾದರಿಯಾಗಿದೆ.
ಕಣಚೂರು ಆಸ್ಪತ್ರೆಯ ಕ್ಯಾನ್ಸರ್ ವಿಭಾಗ ಮುಖ್ಯಸ್ಥ ಡಾ. ಗುರುಪ್ರಸಾದ್ ಮಾತನಾಡಿ ‘ಕೊಪ್ಪದ 17ವರ್ಷದ ಬಾಲಕನಿಗೆ ಕಣ್ಣು , ಮೂಗು, ಕಿವಿ ಎಲ್ಲವನ್ನೂ ಟ್ಯೂಮರ್ ಆವರಿಸಿದ್ದು ಆಹಾರ ಸೇವಿಸುವುದಕ್ಕೂ ಅಸಾಧ್ಯವಾಗಿತ್ತು. ಉಸಿರಾಡಲು ಕಷ್ಟವಾಗುತ್ತಿತ್ತು. ಸುಮಾರು 18 ಸೆಂ. ಮೀ. ಉದ್ದದ ಗಡ್ಡೆ ಬೆಳೆದಿದ್ದು, ಗಂಭೀರ ಪ್ರಮಾಣದಲ್ಲಿ ಕ್ಯಾನ್ಸರ್ ಆವರಿಸಿತ್ತು . ಸಾವಿನ ದವಡೆಯಲ್ಲಿದ್ದ ಬಾಲಕನಿಗೆ ಮರುಜನ್ಮ ಸಿಕ್ಕಿದಂತಾಗಿದೆ’ ಎಂದರು.
ಸರ್ಜನ್ ಡಾ. ರವಿವರ್ಮ ಕೆ, ಡಾ. ಗುರುಪ್ರಸಾದ್, ಡಾ. ನಜೀಬ್, ಡಾ. ಮನೀಷ್ ಶೆಟ್ಟಿ , ಡಾ. ಸಂಭ್ರಮ್, ಡಾ ಪದ್ಮರಾಜ್, ಡಾ. ಚೇತನ್, ಅರವಳಿಕೆ ವಿಭಾಗ ಮುಖ್ಯಸ್ಥ ಡಾ. ವಿನ್ಸೆಂಟ್ ಮಥಾಯಿಸ್ ತಂಡವು ಯಶಸ್ವಿ ಚಿಕಿತ್ಸೆ ನಡೆಸಿತ್ತು.


