ಐತಿಹಾಸಿಕ ಕುರುಹುಗಳು ನಾಪತ್ತೆ.. ಕಣ್ಣಿದ್ದು ಕುರುಡರಾದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು
ಪ್ರಕೃತಿ ಮಾತೆಯ ಮೇಲೆ ಅತ್ಯಾಚಾರ: ಸಾರ್ವಜನಿಕರಿಂದ ತೀರ್ವ ಆಕ್ರೋಶ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕೋಟೆತ್ತಡ್ಕ ಐತಿಹಾಸಿಕ ಬೆಟ್ಟ ಪಾಂಡವರ ಕೋಟೆಯಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಹಗಲು ರಾತ್ರಿ ಎನ್ನದೆ ದಿನದ 24 ಘಂಟೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಐತಿಹಾಸಿಕ ಬೆಟ್ಟವನ್ನು ನಾಶ ಮಾಡುವುದರೊಂದಿಗೆ ಇಲ್ಲಿ ಘನತಾಜ್ಯ ಘಟಕ ಸ್ಥಾಪಿಸಿ ಅಪವಿತ್ರಗೊಳಿಸಲು ರಾಜಕೀಯ ಪಕ್ಷಗಳು ತಾಮುಂದು ತಾಮುಂದು ಎಂದು ಬರುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರಿಗೆ ಈ ಬೆಟ್ಟದ ಇತಿಹಾಸ ಗೊತ್ತಿಲ್ಲವೇನೋ ಎಂಬುದುವುದೇ ಆಶ್ಚರ್ಯವಾಗಿದೆ.. ಹಾಗಾದ್ರೆ ಇದನ್ನು ಒಮ್ಮೆ ಓದಿ ನೋಡಿ…
ಪುರಾತನ ಕಾಲದಲ್ಲಿ ಅಳಿಕೆ ಗ್ರಾಮದ ಬಿಲ್ಲಂಪದವು, ತಾಳಿಪಡ್ಪು, ಮುಳಿಯ, ನೆಗಳಗುಳಿ ಮತ್ತು ಪೆರುವಾಯಿ ಗ್ರಾಮದ ಮುಚ್ಚಿರಪದವು ತಚ್ಚಮೆ, ದೇಮೆಚ್ಚಿ, ಹಾಗೂ ಎಣ್ಮಕಜೆ ಗ್ರಾಮದ ಮುಳಿಯ ಕೊಂಬರಬೆಟ್ಟು ಹೀಗೆ ಹತ್ತೂರಿಗೆ ಒಂದು ಕೇಂದ್ರ ಸ್ಥಳವಾದ ಪಾಂಡವರ ಕೋಟೆ-ಕೋಟೆತ್ತಡ್ಕ ಎಂಬ ಹೆಸರಿನಿಂದಲೂ ಕರೆಯುವ ಸ್ಥಳ ಅಂದಾಜು ಸುಮಾರು ಇನ್ನೂರು ಎಕರೆಯಷ್ಟು ಪ್ರದೇಶ ಅರಣ್ಯ ಪ್ರದೇಶವಾಗಿತ್ತು. ಮೃಗ ಬೇಟೆಗೆ ಬಂದವನೊಬ್ಬ ಹುಲಿ ಎಂಬ ಭಾವನೆಯಿಂದ ಬೇಟೆಗೆ ಬಂದ ಮತ್ತೊಬ್ಬನಿಗೆ ಗುಂಡು ಹಾಕಿ ಕೊಂದದ್ದು, ಹುಲಿ ನವಿಲುಗಳನ್ನು ಬೇಟೆ ಮಾಡಿ ಕೊಂದದ್ದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಈ ಊರಿನ ವೃದ್ಧರಿಗೆ ತಿಳಿದ ಸತ್ಯ ಸಂಗತಿ.
ಕಾರಣಾಂತರ ಪಾಂಡವರ ಕೋಟೆಯ ಅರಣ್ಯ ಮಾತ್ರ ಉಳಿದಿತ್ತು. ಅದರ ಲಗ್ತ ಸ್ಥಳ ಗೋಚರವೂ ಆಗಿತ್ತು. ಮುಂದೆ ಗೋಚರವೂ ಗೇರು ತೋಟವಾಯಿತು. ಇಲ್ಲಿ ಗತಕಾಲದ ಸಾಕ್ಷಿಗಳು ಅನೇಕವಿದೆ. ಇತಿಹಾಸ ಪ್ರಸಿದ್ಧ ಪುರಾತನ ಕಾಲದ ಆರಾಧನ ಸ್ಥಳವಾಗಿದ್ದ “ಪಾಂಡವರ ವನ” ದಲ್ಲಿ ಹಿಂದೆ ಪಾಂಡವರು ವನವಾಸ ಗೈದು ಸುಮಾರು ವರುಷ ಈ ಪ್ರದೇಶದಲ್ಲಿ ವಾಸವಾಗಿದ್ದರು ಅದಕ್ಕಾಗಿ ಈ ಕೋಟೆಗೆ ಪಾಂಡವರ ಕೋಟೆ ಎಂಬ ಹೆಸರು ಬಂತು ಎಂಬುವುದು ಈ ಪ್ರದೇಶದ ಇತಿಹಾಸ. ಇದಕ್ಕೆ ಸಂಬಂಧಪಟ್ಟಂತೆ ಇಲ್ಲಿ ಅನೇಕ ಕುರುಹುಗಳು ಕಾಣಸಿಕ್ಕಿವೆ. ಪಾಂಡವರು ನೀರಿಗಾಗಿ ತೋಡಿದ ಬಾವಿ, ಭೀಮನ ಪಾದ ಹೆಜ್ಜೆ ಗುರುತು, ಅಯ್ಯಂಗಾಯಿ ಕಲ್ಲು ಹೀಗೆ ಹಲವು ಅನಾದಿ ಕಾಲದ ಕುರುಹುಗಳನ್ನು ಕಂಡವರು ಸಾವಿರಾರು ಜನ.
ಪಾಂಡವರ ಕೋಟೆಯೊಳಗಿದ್ದ ಪಾಂಡವರ ವನ ಒಂದು ಆಕರ್ಷಣೀಯ ಸ್ಥಳವಾಗಿತ್ತು. ಹಲಸಿನ ಮರಗಳು, ಸಾಗುವಾನಿ, ಮಾವಿನ ಮರಗಳು ದೈತ್ಯವಾಗಿ ಬೆಳೆದಿತ್ತು. ಶ್ರೀಗಂಧದ ಮರ, ಕಾಚು ಇತ್ಯಾದಿ ಶ್ರೇಷ್ಠ ವೃಕ್ಷಗಳಿಂದ ಕೂಡಿದ ವನವಾಗಿತ್ತು.
ಗೋವುಗಳ ಮೇವು, ಕಾಡು, ಗುಡ್ಡ, ನೀರು ಹೀಗೆ ಎಲ್ಲವನ್ನು ಕೂಡಿಸಿಕೊಂಡು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿ ಪ್ರಕೃತಿ ರಮಣೀಯ ದೃಶ್ಯದೊಂದಿಗೆ ಎಲ್ಲರನ್ನು ಆಕರ್ಷಿಸುತ್ತಿದ್ದ ಪಾಂಡವರ ಕೋಟೆಯ ಈಗಿನ ದುಸ್ಥಿತಿ ನೋಡಿದರೆ ಕಣ್ಣಂಚಲ್ಲಿ ನೀರು ಸುರಿಯುತ್ತದೆ.
ಕಾಡು, ಮರ ಗಿಡಗಳನ್ನು ಕಡಿದು, ಭೂಮಿಯನ್ನು ಅಗೆದು, ವಾಹನ ಚಲಾವಣೆಗೆ ಸಂಪರ್ಕ ರಸ್ತೆ ಕಲ್ಪಿಸಿ, ಗೇಟ್ ನಿರ್ಮಿಸಿ, ತಮಗೆ ಇಷ್ಟ ಬಂದಂತೆ ಪ್ರಕೃತಿ ಮಾತೆಯ ಮೇಲೆ ಅತ್ಯಾಚಾರ ಮಾಡಲು ಇವರಿಗೆ ಇಷ್ಟೆಲ್ಲಾ ಕಾರ್ಯವೈಖರಿಗೆ ಅನುಮತಿ ನೀಡಿದವರು ಯಾರು? ಈ ಬಗ್ಗೆ ಹೇಳೋರು ಕೇಳೋರು ಯಾರೂ ಇಲ್ಲವೆ? ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಗಣಿ ಇಲಾಖೆಗೆ, ಶಾಸಕರಿಗೆ ಮನವಿಸಲ್ಲಿಸಿದರೂ ಇವರೆಲ್ಲರೂ ಕಣ್ಣಿದ್ದು ಕುರುಡರಂತಿರುವುದು ಸಾರ್ವಜನಿಕರಲ್ಲಿ ತೀರ್ವ ಆಕ್ರೋಶ ಮೂಡಿಸಿದೆ. ಇಂತಹ ಭೀಕರ ಪ್ರಕೃತಿ ನಾಶ ಕೃತ್ಯದಲ್ಲಿ ಶಾಸಕರ, ಗಣಿ ಇಲಾಖೆಯ, ಸಂಬಂಧ ಪಟ್ಟ ಅಧಿಕಾರಿಗಳ ಕೈವಾಡ ಇದೆಯೋ..? ಎಂಬುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಪಂಚಾಯತ್ ಸದಸ್ಯರು ಹಾಗು ಶಾಸಕರು ಯಾರ ಮುಲಾಜಿಗಾಗಿ ಮೌನವಾಗಿದ್ದಾರೆ? ಊರಿನ ರಕ್ಷಣೆಗೆ ನಿಲ್ಲ ಬೇಕಾದವರು ಭಕ್ಷಣೆಗೆ ಹೊರಟರೆ? ಹೀಗೆ ಆಕ್ರೋಶಗೊಂಡ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಮುಂದಿನ ಮತದಾನದಲ್ಲಿ ಮತಚಲಾಯಿಸಲು ಕಡಿವಾಣ ಹಾಕಲು ಮುಂದಾಗಿದ್ದಾರೆ.