ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಗೆಳತಿಯ ಸಾವಿನ ಸುದ್ದಿ ತಿಳಿದು ಅನುತ್ತೀರ್ಣಳಾಗಿದ್ದ ಮತ್ತೋರ್ವ ವಿದ್ಯಾರ್ಥಿನಿಯು ವಿಷಸೇವಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲಿ ನಡೆದಿದೆ.
ಕಳಸ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಕಳಸ ಸಮೀಪದ ಎಸ್.ಕೆ. ಮೇಗಲ್ ಗ್ರಾಮದ ಚಂದ್ರರಾಜಯ್ಯ ಎಂಬುವವರ ಪುತ್ರಿ ಸ್ಪರ್ಶ ಜೀವಶಾಸ್ತ್ರ ವಿಭಾಗದಲ್ಲಿ ಅನುತ್ತೀರ್ಣಗಳಾಗಿದ್ದಳು. ಇದರಿಂದ ಮನನೊಂದು ಮನೆಯಲ್ಲೇ ವಿಷ ಸೇವಿಸಿದ್ದು, ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾಳೆ.
ಗೆಳತಿ ಸ್ಪರ್ಶ ಸಾವಿನ ಸುದ್ದಿ ತಿಳಿದು ದೀಕ್ಷಿತ ಮನೆಯಲ್ಲಿದ್ದ ಕಳೆನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ದೀಕ್ಷಿತ ಸಹ ಅನುತ್ತೀರ್ಣಳಾಗಿದ್ದು ನಿನ್ನೆ ಮರುಪರೀಕ್ಷೆ ಕಟ್ಟಿಬಂದಿದ್ದಳು ಎಂದು ತಿಳಿದುಬಂದಿದೆ. ಆದರೆ ಇಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಸೇವಿಸಿದ್ದು ತೀವ್ರ ಅಸ್ವಸ್ಥಳಾಗಿದ್ದು ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.