ಕಡಬ: ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಹಾಗೂ ಪದವು ಮಧ್ಯೆ ಬರುವ ಹೇಮಳ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲೇ ಗೋವಧೆ ಮಾಡುವ ಕಿಡಿಗೇಡಿಗಳು ಗೋವಿನ ತಲೆಯನ್ನು ಹಾಗೂ ಇತರ ತ್ಯಾಜ್ಯವನ್ನು ಎಸೆದು ವಿಕೃತಿ ಮೆರದ ಘಟನೆ ನಡೆದಿದೆ.
ಒಂದು ದನದ ತಲೆ, ಇನ್ನೊಂದು ಪ್ಲಾಸ್ಟಿಕ್ ಚೀಲದಲ್ಲಿ ಗೋವಿನ ಎಲುಬು ಹಾಗೂ ಇನ್ನಿತರ ತ್ಯಾಜ್ಯವನ್ನು ಬೆಳ್ಳಂಬೆಳಿಗ್ಗೆ ಎಸೆಯಲಾಗಿದೆ. ಪದವಿನ ಮುರಚೆಡವು ಹಾಗೂ ಹೇಮಳ ಮಧ್ಯೆ ಯಾವುದೇ ವಾಸದ ಮನೆಯಾಗಲಿ ಇತರ ಕಟ್ಟಡವಾಗಲಿ ಇಲ್ಲದೆ ಇರುವ ಈ ಪ್ರದೇಶದಲ್ಲಿ ಅನಾಯಾಸವಾಗಿ ಈ ಕೃತ್ಯ ಮಾಡಲಾಗಿದೆ.
ಪದವು ಹಾಗೂ ಕುಂತೂರಿನಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು, ಇಲ್ಲಿ ಗೋವಧೆ ಮಾಡುವ ಕಿಡಿಗೇಡಿಗಳ ಕೃತ್ಯ ಇದು ಎಂದು ಹೇಳಲಾಗಿದೆ. ಕೊಳೆತ ಸ್ಥಿತಿಯಲ್ಲಿದ ಗೋವಿನ ತಲೆ ಹಾಗೂ ತ್ಯಾಜ್ಯದ ದುರ್ವಾಸನೆ ತಡೆಯಲಾಗದೆ, ಸ್ಥಳೀಯರು ಸ್ಥಳಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂತು, ತಕ್ಷಣ ಅದನ್ನು ರಸ್ತೆ ಬದಿಗೆ ಸರಿಸಲಾಯಿತು.
ಈ ಬಗ್ಗೆ ಪೆರಾಬೆ ಗ್ರಾಮ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ರೈ ಅಗತ್ತಾಡಿ , ಸ್ಥಳೀಯ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಈ ಭಾಗದಲ್ಲಿ ಸಿ.ಸಿ ಕ್ಯಾಮರ ಅಳವಡಿಸಬೇಕು ಎಂದು ಸ್ಥಳೀಯರಾದ ಸೋಮಪ್ಪ ಗೌಡ ಹಾಗೂ ಸುಬ್ರಹ್ಮಣ್ಯ ಗೌಡ ಅಗ್ರಹಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸರುವ ಪಂ ಅಧ್ಯಕ್ಷರು ಬೇಡಿಕೆಯನ್ನು ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.