ಕಡಬ: ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ರೂಂ ಒಂದಕ್ಕೆ ಕರೆತಂದ ವಿಷಯ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಪೆರಾಬೆ ಗ್ರಾಮದ ಕುಂತೂರಿನಲ್ಲಿ ನಡೆದಿದೆ.
ಕುಂತೂರು ಗ್ರಾಮದ ನಿವಾಸಿ ಎನ್ನಲಾದ ಯುವಕ ಪೆರಾಬೆ ಗ್ರಾ.ಪಂ ಸಮೀಪವಿರುವ ಬಾಡಿಗೆ ಕೋಣೆಗೆ ಮಂಜೇಶ್ವರ ಮೂಲದ 21 ವರ್ಷದ ಹಿಂದೂ ಯುವತಿಯನ್ನು ಕರೆತಂದಿದ್ದ ಎನ್ನಲಾಗಿದೆ. ಘಟನೆಯ ಮಾಹಿತಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಪರಾರಿಯಾಗಿದ್ದಾನೆ. ಹೋಟೆಲೊಂದರಲ್ಲಿ ಇಬ್ಬರಿಗೂ ಪರಿಚಯವಾಗಿತ್ತು ಎನ್ನಲಾಗಿದೆ.
ಕಡಬ ಠಾಣಾ ಎಸ್ .ಐ ಆಂಜನೇಯ ರೆಡ್ಡಿ ನೇತೃತ್ವದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ವಿವರ ಪಡೆಯದೆ ಬಾಡಿಗೆ ರೂಂ ಪಡೆದಿರುವ ಬಗ್ಗೆ ಹಾಗೂ ಕಟ್ಟಡ ಮಾಲಿಕ ಸ್ಥಳಕ್ಕೆ ಬರುವಂತೆ ಸಂಘಟನೆಯವರು ಪಟ್ಟು ಹಿಡಿದರು. ಜನ ಸೇರುತ್ತಿರುವುದನ್ನು ಗಮನಿಸಿದ ಎಸ್.ಐ ಸ್ಥಳದಿಂದ ತೆರಳುವಂತೆ ನೆರೆದಿದ್ದವರಿಗೆ ತಿಳಿಸಿ ಪರಿಸ್ಥಿತಿ ನಿಭಾಯಿಸಿದರು.
ಯುವತಿಯನ್ನು ಪೊಲೀಸರು ಆಕೆಯ ಮನೆಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ. ಆದರೆ ಪರಾರಿಯಾದ ಯುವಕನ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.